ಕಾಲುವೆಗೆ ಮಾರ್ಚ್ 21ರವರೆಗೆ ನೀರು ಹರಿಸಿ ನಂತರ ಏಪ್ರಿಲ್ ತಿಂಗಳಲ್ಲಿ ಕೇವಲ ಮೂರು ದಿನ ಮಾತ್ರ ನೀರು ಹರಿಸಿ ಬಂದ್ ಮಾಡುವ ನಿರ್ಧಾರವನ್ನು ಕೈಬಿಟ್ಟು, ಏಪ್ರಿಲ್ 15ರವರೆಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಆಗ್ರಹಿಸಿದೆ.
ಈ ಕುರಿತು ಸೋಮವಾರ ಬೆಳಿಗ್ಗೆ ಸುರಪುರ ತಾಲೂಕಿನ ದೇವಪುರ ಕ್ರಾಸ್ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ, ನಾರಾಯಣಪುರ ಕೃಭಾಜನಿನಿ ಮುಖ್ಯ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಪ್ರತಿಭಟನಾಕಾರರು ಮಾತನಾಡಿ, ‘ರೈತರು ನೀರಾವರಿಯನ್ನು ಅವಲಂಬಿಸಿ ಶೇಂಗಾ, ಸಜ್ಜೆ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು, ಈ ಬೆಳೆಗಳು ಈಗ ಕಾಳು ಕಟ್ಟುವ ಹಂತದಲ್ಲಿವೆ. ಏಪ್ರಿಲ್ 15ರವರೆಗೆ ನಿರಂತರವಾಗಿ ಕಾಲುವೆಗೆ ನೀರು ಹರಿಸಿದರೆ ಮಾತ್ರ ರೈತರ ಬೆಳೆ ಕೈಗೆ ಸಿಗಲಿದೆ. ಇಲ್ಲವಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
‘ಬೇಸಿಗೆ ಬೆಳೆಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ನಡೆಸಿದ ಸಲಹಾ ಸಮಿತಿಯ ಸಭೆಯಲ್ಲಿ ಮಾರ್ಚ್ 21ರವರೆಗೆ ನೀರು ಹರಿಸಿ ನಂತರ ಏಪ್ರಿಲ್ ತಿಂಗಳಲ್ಲಿ ಕೇವಲ ಮೂರು ದಿನ ಮಾತ್ರ ನೀರು ಹರಿಸುವ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕ’ ಎಂದು ಸಂಘಟನೆ ಆರೋಪಿಸಿದೆ.
‘ಕಳೆದ ಎರಡು, ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀಜ, ಗೊಬ್ಬರ, ಕೀಟನಾಶಕ ಮತ್ತು ಕೂಲಿ ವೆಚ್ಚಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಇಂತಹ ನಿರ್ಧಾರ ರೈತರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಲಿದೆ’ ಎಂದು ಹೇಳಿದರು.
‘ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ರೈತರ ಬೇಡಿಕೆಗೆ ಸ್ಪಂದಿಸಿ ಏಪ್ರಿಲ್ 15ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡುವ ಮೂಲಕ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಸಾಮಾಜಿಕ ಬಹಿಷ್ಕಾರ : ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಈ ಸಂದರ್ಭದಲ್ಲಿ ವೆಂಕಟೇಶಗೌಡ ಕುಪಗಲ್, ಹಣಮಂತ್ರಾಯ ಚಂದಲಾಪೂರ, ಅಯ್ಯಣ್ಣ ಹಾಲಭಾವಿ, ಮಹಾದೇವಮ್ಮ ಬೇವಿನಾಳಮಠ, ಮರಿಯಪ್ಪ ಮಾಸ್ಟರ ಹೇಮನೂರು, ತಿಪ್ಪಣ್ಣ ಜಂಪಾ, ತಿರುಪತಿ ಕುಪಗಲ್, ಹನುಮಗೌಡ ನಾರಾಯಣಪೂರ, ಅವಿನಾಶ ಕೊಡೇಕಲ್, ಮಲ್ಲಣ್ಣ ಹಾಲಭಾವಿ, ಸಾಹೇಬಗೌಡ ಮದಲಿಂಗನಾಳ, ಗದ್ದೆಪ್ಪ ನಾಗಬೇವಿನಾಳ, ಭೀಮಣ್ಣ ತಿಪ್ಪನಟಗಿ, ನಾಗಪ್ಪ ಕುಪಗಲ್, ಭೀಮನಗೌಡ ಕರ್ನಾಳ, ರಾಗು ಕುಪ್ಪಗಲ್, ಶಿವನಗೌಡ ರುಕ್ಕಾಪೂರ, ಪ್ರಭು ದೊರಿ, ದೇವಿಂದ್ರಪ್ಪ ತಿಪ್ಪನಟಗಿ, ರೋನರೀಸ್ ರೋಸ್ಟ್, ತಿಪ್ಪಣ್ಣ ತಳವಾರ, ಭೀಮರಾಯ ಒಕ್ಕಲಿಗ, ಯಂಕೋಬ ದೊರೆ ಕುಪಗಲ್, ಲೋಹಿತ್ ಕುಮಾರ, ಭೀಮನಗೌಡ ಸೂಗೂರು, ಮಾನಪ್ಪ ಕೊಂಬಿನ್, ಹಣಮಂತ ಕುಂಬಾರಪೇಟೆ, ಶಿವಲಿಂಗಪ್ಪ ಕುಂಬಾರಪೇಟೆ, ಚಂದ್ರಶೇಖರ ಗುಳಬಾಳ, ಕಾಮರಾಯ ಮದಲಿಂಗನಾಳ, ಶಂಕ್ರಪ್ಪ ಗುಳಬಾಳ, ಮಲ್ಲಣ್ಣ ಗುಳಬಾಳ, ಹೆಚ್ ಆರ್ ಬಡಿಗೇರ, ದೇವಪ್ಪ ಯರಕಿಹಾಳ, ದೇವಿಂದ್ರಪ್ಪ ಬಳಿಚಕ್ರ, ಸಂಜೀವ ಗುಳಬಾಳ, ಶ್ರವಣಕುಮಾರ ಡೊಣ್ಣಿಗೇರಿ, ಹಣಮಂತ್ರಾಯಗೌಡ ಕರ್ನಾಳ ಇನ್ನಿತರರು.





