ಸಾವೂರ ಗ್ರಾಮಕ್ಕೆ ಹೊಸ ಶಾಲಾ ಕಟ್ಟಡ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರರ ವಿಭಾದ ಜಿಲ್ಲಾ ಉಪಾಧ್ಯಕ್ಷ ನೇತೃತ್ವದಲ್ಲಿ ಸೋಮವಾರ ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನರೆಡ್ಡಿ ತುನ್ನೂರು ರವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜಿಲ್ಲಾ ಉಪಾಧ್ಯಕ್ಷ ಮರಲಿಂಗ ಸಾವೂರ್ ಮಾತನಾಡಿ, ‘ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾವೂರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಸ್ತುತ ಕಟ್ಟಡವು ಸಂಪೂರ್ಣವಾಗಿ ಜೀರ್ಣಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗಿದ್ದು, ಮಳೆಗಾಲದಲ್ಲಿ ಶಾಲಾ ಕಟ್ಟಡ ಶಿಥಿಲಗೊಂಡು ತರಗತಿ ಕೊಠಡಿಗಳಲ್ಲಿ ನೀರು ಸೋರುತ್ತವೆ ಅದಲ್ಲದೇ ತರಗತಿ ತಕ್ಕಂತೆ ಕೊಠಡಿಗಳಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಂದುವರೆದು ಅವರು ‘ಸಾವೂರ ಗ್ರಾಮವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಕೂಡಿದ್ದು, ಇಲ್ಲಿನ ಮಕ್ಕಳಿಗೆ ಸರ್ಕಾರಿ ಶಾಲೆಯೇ ಶಿಕ್ಷಣದ ಏಕೈಕ ಆಶ್ರಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗೆ ನೂತನ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಆದರಿಂದ ಹೊಸ ಕಟ್ಟಡ ನಿರ್ಮಾಣವಾದಲ್ಲಿ ಮಕ್ಕಳಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣದಲ್ಲಿ ಶಿಕ್ಷಣ ಪಡೆಯುವ ಅವಕಾಶ ಲಭ್ಯವಾಗುವುದರ ಜೊತೆಗೆ, ಶಾಲಾ ದಾಖಲಾತಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಟಿ ಶಶಿಧರ್ ಭೋಧಿಮಂಡಲ ಕಲಾ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಸಂಗೀತ ಕಲಾವಿದರ ಸಂಭ್ರಮ
ಆದ್ದರಿಂದ, ಸಂಬಂಧಿಸಿದ ಇಲಾಖೆಯವರು ಅಥವಾ ಜನಪ್ರತಿನಿಧಿಗಳು ತಮ್ಮ ಅನುದಾನ ಅಥವಾ ಸರ್ಕಾರದ ಸಂಬಂಧಿಸಿದ ಯೋಜನೆಗಳ ಮೂಲಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಾವೂರ ಗ್ರಾಮಕ್ಕೆ ನೂತನ ಶಾಲಾ ಕಟ್ಟಡವನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.





