ಸಿದ್ಧಾರೂಢ ವೀರುಪಾಕ್ಷ ಹಾಗೂ ಶ್ರವಣ ಬಸವರಾಜ ಆನೇಗುಂದಿ ಅವರ ಸ್ಮರಣಾರ್ಥವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಾಹಪುರ ವತಿಯಿಂದ ಖ್ಯಾತ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಬದುಕು, ಬರಹ ಕುರಿತು ವಿಚಾರ ಸಂಕಿರಣ ಹಾಗೂ ತಾಲ್ಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಪ್ಪ ಹೊಟ್ಟಿ, ‘ಸಾಹಿತ್ಯವು ಸಮಾಜದ ಅಂತರಂಗವನ್ನು ಸ್ಪರ್ಶಿಸಬೇಕು ಹಾಗೂ ಇಂದಿನ ತಲೆಮಾರಿಗೆ ಮೌಲ್ಯಾಧಾರಿತ ಬದುಕಿನ ಪಾಠ ಕಲಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಸಾಹಿತಿ ಗವಿಸಿದ್ದಪ್ಪ ಪಾಟೀಲ್, ‘ಚಂದ್ರಕಾಂತ ಕರದಳ್ಳಿ ಅವರ ಬದುಕು ಮತ್ತು ಬರಹಗಳನ್ನು ಸ್ಮರಿಸಿ, ಅವರು ಕಾಲಪ್ರಜ್ಞೆ ಹೊಂದಿದ ಶಿಸ್ತುಬದ್ಧ ಲೇಖಕರಾಗಿದ್ದು, ಪುಸ್ತಕಗಳ ಮೌಲ್ಯವನ್ನು ಅರಿತ ವೇಗದ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಯಾದಗಿರಿ ಜಿಲ್ಲೆಯ ಕರದಳ್ಳಿ ಗ್ರಾಮದಲ್ಲಿ ಜನಿಸಿದ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅಲ್ಲಿಯೇ ಪಡೆದು, ಜೀವನದ ಏರಿಳಿತಗಳನ್ನು ಎದುರಿಸಿ ಛಲದಿಂದ ಮುಂದುವರೆದವರು’ ಎಂದು ಹೇಳಿದರು.
‘ಗಾಂಧಿ ಚೌಕ್’ ಕವನದ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡ ಕರದಳ್ಳಿ ಅವರು, ‘1983ರಲ್ಲಿ ಚಿಗರಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಬಸವ ಸಾಂಸ್ಕೃತಿ ಮೌಲ್ಯಗಳು ಹಾಗೂ ಶಾಹಪುರದ ಸ್ಥಳೀಯ ಸಮಸ್ಯೆಗಳ ಕುರಿತು ಸಾಹಿತ್ಯ ರಚನೆಯ ಮೂಲಕ ಬೆಳಕು ಚೆಲ್ಲಿದರು. 2022ರಲ್ಲಿ ಅವರು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು’ ಎಂದು ಹೇಳಿದರು.
ಅವರು ಮುಂದುವರೆದು ‘ ಕೇವಲ 23 ವರ್ಷಗಳ ಕಾಲಾವಧಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಕರದಳ್ಳಿ ಅವರನ್ನು ಮಕ್ಕಳ ಸಾಹಿತಿಯಾಗಿ ಗುರುತಿಸಲಾಗುತ್ತದೆ. ಅವರಿಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ’ ಎಂದು ತಿಳಿಸಿದರು.
ಆಶಯ ನುಡಿಗಳನ್ನು ನೀಡಿದ ಡಾ. ಜಯದೇವಿ ಗಾಯಕವಾಡ, ‘ಕಲ್ಯಾಣ ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು.
ಚನ್ನಣ್ಣ ವಾಲಿಕರ್, ಜಂಬಣ್ಣ ಅಮರಚಿಂತನ, ಗೀತಾ ನಾಗಭೂಷಣ, ಚಂದ್ರಶೇಖರ ಪಾಟೀಲ್, ಬಿಟಿ ಲಲಿತ ನಾಯಕ್ ಅವರ ಬರಹಗಳನ್ನು ಬಗ್ಗೆ ತಿಳಿಸುತ್ತಾ, ಕಾವ್ಯವು ಜನಸಾಮಾನ್ಯರ ಬದುಕಿಗೆ ತಲುಪಬೇಕು ಹಾಗೂ ಸಾಮಾಜಿಕ ಸಂವೇದನೆಯಿಂದ ಕೂಡಿರಬೇಕು ಎಂದು ಅಭಿಪ್ರಾಯಪಟ್ಟರು.
ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆ ಆಗಿಲ್ಲವೆಂದು ಬೆಸರ್ ವ್ಯಕ್ತಪಡಿಸಿದರು. ಬುದ್ಧ ಬಸವ ಅಂಬೇಡ್ಕರ್ ಅವರ ಸಮಾನತೆಯ ಸಮಾಜ ನಿರ್ಮಾಣದ ಕನಸು ನನಸಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡ ನೀಲಕಂಠ ಬಡಿಗೇರ್ ಡಾ ಜಯದೇವಿ ಗಾಯಕವಾಡ ಅವರ ಸಾಹಿತ್ಯವನ್ನು ಹಾಡಿನ ಮೂಲಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರವೀಂದ್ರನಾಥ ಹೊಸ್ಮನಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಿದ್ಧಲಿಂಗಣ್ಣ ಆನೇಗುಂದಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿವಿಧ ಗಣ್ಯರು ಹಾಗೂ ಸಾಹಿತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಕವಿಗಳು ಕಾವ್ಯ ವಾಚನ ಮಾಡಿದರು.

ಇದನ್ನು ಓದಿದ್ದೀರಾ? ಯಾದಗಿರಿ | ಕಾಟಾಚಾರ ರಸ್ತೆ ದುರಸ್ತಿ; ದಸಂಸ ಆಕ್ರೋಶ
ಕಾರ್ಯಕ್ರಮವನ್ನು ಪ್ರಕಾಶ ದೊರೆ ಸ್ವಾಗತಿಸಿದರು. ಸುರೇಶ್ಬಾಬು ಕೆ. ಅರಣಿ ಹಾಗೂ ಚಂದ್ರಕಲಾ ನಿರೂಪಿಸಿದರು. ನಿಂಗಣ್ಣ ತಿಪ್ಪನಹಳ್ಳಿ ವಂದಿಸಿದರು.





