“ಕಲಾವಿದರ ಸಂಗೀತ ಉಳಿವಿಗಾಗಿ” ಸಂಗೀತ ಕಲಾವಿದರ ಸಂಭ್ರಮ ಕಾರ್ಯಕ್ರಮವನ್ನು ಟಿ ಶಶಿಧರ್ ಭೋಧಿಮಂಡಲ ಕಲಾ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಸೋಮವಾರ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಕಿತ್ತುರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಮಾತನಾಡಿ, ‘ದಿವಂಗತ ಟಿ ಶಶಿಧರ್ ಅವರು ಅತ್ಯಂತ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಸವಿ ನೆನಪಿಗಾಗಿ ಅವರ ಅಳಿಯರಾದ ರಂಗನಾಥ ಬಾಗಲಿ ಅವರು ಶಶಿಧರ್ ಅವರ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸದ ವಿಷಯ’ ಎಂದರು.
‘ಈ ಸಂದರ್ಭದಲ್ಲಿ ಶಶಿಧರ್ ಅವರು ನಮ್ಮ ನಡುವೆ ಇರಬೇಕಿತ್ತು. ಅವರು ಬದುಕಿದ್ದರೆ ಸರ್ಕಾರದಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ಅವರ ವ್ಯಕ್ತಿತ್ವದ ಗತ್ತು, ಗಮ್ಮತ್ತು ಬೇರೆಯದೇ ಇತ್ತು ಎಂದು ಭಾವುಕರಾಗಿ ನುಡಿದರು. ಜೊತೆಗೆ ಅವರ ಹೆಸರನ್ನು ಉಳಿಸಬೇಕಾದರೆ ಉತ್ತಮ ಸಮಾಜ ಸೇವೆ ಮಾಡಬೇಕು’ ಎಂದು ರಂಗನಾಥ ಬಾಗಲಿ ಅವರಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ ಶಶಿಧರ್ ಭೋಧಿಮಂಡಲ ಕಲಾ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಂಗನಾಥ ಬಾಗಲಿ ಅವರು ವಹಿಸಿದ್ದರು. ಸುಗಮ ಸಂಗೀತ ಹಾಗೂ ವಚನ ಗಾಯನವನ್ನು ಮರೆಪ್ಪ ಶಿರವಾಳ, ಶರಣು ಕೋಲಕುಂದ, ತತ್ವಪದವನ್ನು ಸಾಬಯ್ಯ ದೇಸಾಯಿ, ಭರತನಾಟ್ಯವನ್ನು ಸಾನ್ವಿ, ಭಜನೆ ಗೀತೆಗಳನ್ನು ಶರಣಮ್ಮ ದೊಡ್ಡಮನಿ, ಜಾನಪದ ಗಾಯನವನ್ನು ತಿರುಪತಿ ವೈದ್ಯ ಹಾಗೂ ಮಹೇಶ್ ಶಿರವಾಳ ಸೇರಿದಂತೆ ಇನ್ನಿತರ ಕಲಾವಿದರು ಪ್ರಸ್ತುತಪಡಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಎಐಕೆಕೆಎಂಎಸ್ ಪ್ರತಿಭಟನೆ
ಕಾರ್ಯಕ್ರಮದ ನಿರೂಪಣೆಯನ್ನು ವೀರೇಶ ಕೊಂಕಲ್ ಹಾಗೂ ಮಲ್ಲಿಕಾರ್ಜುನ್ ಶಹಾಪುರ ಅವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮಾನಿ, ಕಾಲಿಂಗಪ್ಪ ಹೊಸಮನಿ, ಕೃಷ್ಣಮೂರ್ತಿ ಕುಲಕರ್ಣಿ, ಗೋಪಾಲ ಗಿರೆಪ್ಪನೋರ್, ಶರಣುಕುಮಾರ್ ವಠಾರ, ವೀರೇಶ, ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.





