ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಓರ್ವನ ಕಾಲು ತುಂಡಾಗಿದ್ದು, ಇಬ್ಬರು ಯುವಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ
ಮರಳು ಹಾಗೂ ಮಣ್ಣು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.
ಕೊಂಚಿ, ಕೊರಮ ಸಮುದಾಯದ ಮೂವರು ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಬ್ಬ ಯುವಕನ ಕಾಲು ತೊಡೆಯಿಂದ ಸಂಪೂರ್ಣವಾಗಿ ಕತ್ತರಿಸಿ ಹೊರಬಿದ್ದಿರುವುದು ಘಟನೆಯ ಭೀಕರತೆಯನ್ನು ತೋರಿಸುತ್ತದೆ. ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಮೂವರನ್ನೂ ಸ್ಥಳೀಯರು ಕೂಡಲೇ ರಕ್ಷಿಸಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಅತಿ ಗಂಭೀರವಾಗಿದ್ದು, ಜೀವಾಪಾಯದ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ “ಕರಾವಳಿಯ ರಕ್ತ ಕಣ್ಣೀರು”
“ಅತಿವೇಗ, ನಿರ್ಲಕ್ಷ್ಯ ಚಾಲನೆ ಮತ್ತು ನಿಯಂತ್ರಣ ರಹಿತ ಮರಳು ಸಾಗಾಣಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈಶ್ವರ್ ಎಂಬ ಯುವಕ ಸಾರ್ವಜನಿಕ ಆಸ್ಪತ್ರೆ ಶಹಾಪುರದಲ್ಲಿ ಮರಣ ಹೊಂದಿದ್ದಾನೆ ಹಾಗೂ ಇಬ್ಬರೂ ಯುವಕರಲ್ಲಿ ಒಬ್ಬರು ಕಲಬುರಗಿ ಹಾಗೂ ಒಬ್ಬರು ಇಲ್ಲೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ” ಎಂದು ನಿಜಾಮುದ್ದಿನ್ ಐ ಎಸ್ ಮಾಹಿತಿ ನೀಡಿದ್ದಾರೆ.
“ಸ್ಥಳದಲ್ಲಿ ಪಿಐ ಸಾಹೇಬರು ತನಿಖೆ ಕೈಗೊಂಡಿದ್ದು, ಅಪಘಾತ ಮಾಡಿದ ವಾಹನ ಯಾವುದೆಂದು ತಿಳಿದುಬಂದಿಲ್ಲ. ದೂರು ದಾಖಲಾದ ಬಳಿಕ ತಿಳಿಸಲಾಗುವುದು, ಸದ್ಯಕ್ಕೆ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ” ಎಂದರು.





