“ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.” ಎಂದು ಶರಣಪ್ಪ ಸಲಾದಪುರ್ ಅವರು ಹೇಳಿದರು. ಯಾದಗಿರಿ ಜಿಲ್ಲೆಯ ಶಾಹಪುರ ಪಟ್ಟಣದ ವೈಷ್ಣವಿ ಫಂಕ್ಷನ್ ಹಾಲ್ನಲ್ಲಿ ಮಾತೃ ಛಾಯಾ ಹಿರಿಯ ಪ್ರಾಥಮಿಕ ಶಾಲೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ‘ಮಾತೃಛಾಯಾ ಸಾಂಸ್ಕೃತಿಕ ಹಬ್ಬ’ ಹಾಗೂ ರಾಜ್ಯಮಟ್ಟದ ‘ಕನಕದಾಸ ಸೇವಾ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಸಂಸ್ಕೃತಿ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಿಗೆ ಬೋಧಿಸುವುದು ಅಗತ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ರಾಜ್ಯಮಟ್ಟದ ‘ಕನಕದಾಸ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಾಹಿತ್ಯ ಕ್ಷೇತ್ರದಿಂದ ಸಂಜೀವಕುಮಾರ್ ಅತಿವಾಳೆ, ಸಾಮಾಜಿಕ ಕ್ಷೇತ್ರದಿಂದ ಅನಿಲ್ ತೇಜಪ್ಪ ಬಲ್ಲೂರ್, ಸಾಮಾಜಿಕ ಕಾರ್ಯಕರ್ತರಾಗಿ ಮಾನಪ್ಪ ಹಡಪದ್, ಶಿಕ್ಷಣ ಕ್ಷೇತ್ರದಿಂದ ಚಂದ್ರಕಲಾ ಗೂಗಲ್ ಹಾಗೂ ಮೀನಾಕ್ಷಿ ಆರ್. ಹೊಸಮನಿ, ವೈದ್ಯಕೀಯ ಕ್ಷೇತ್ರದಿಂದ ಡಾ. ಜಾಫರ್ ಷರೀಫ್ ನಿಡಗುಂದಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಂಬರೀಶ್ ದರ್ಶನಾಪುರ, ಮಂತಪ್ಪ ಕಂದಕೂರ್, ಡಾ. ಶರಣು ಬಿ. ಗದ್ದುಗೆ, ಯಲ್ಲಪ್ಪ ನರಿ ಹಾಗೂ ಮಲ್ಲಿಕಾರ್ಜುನ್ ಕಂದುಕುರ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಧರ್ಮ ಸೌಹಾರ್ದದ ಇಫ್ತಾರ್ ಕೂಟ, ಏಕತೆಯ ಸಂದೇಶ ಸಾರಿದ ಮುಸ್ಲಿಂ ಬಾಂಧವರು
ಶಾಲೆಯ ಸಂಸ್ಥಾಪಕರಾದ ತಿಪ್ಪಣ್ಣ ಖ್ಯಾತನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸುರೇಶ್ ಬಾಬು ಅರುಣಿ ಕಾರ್ಯಕ್ರಮ ನಿರೂಪಿಸಿದರು. ಹೇನಾಬೇಗಂ ಸ್ವಾಗತಿಸಿದರು ಹಾಗೂ ಕುಮಾರಿ ಭಾಗ್ಯಶ್ರೀ ವಂದಿಸಿದರು.





