ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯ ಮುಗಿಸಿ, ಹೈದರಾಬಾದ್ ಮಾರ್ಗವಾಗಿ ಊರಿಗೆ ಹಿಂತಿರುಗುತ್ತಿದ್ದ ವೇಳೆ ಬಿಜೆಪಿ ಮಾಜಿ ಶಾಸಕ ರಾಜು ಗೌಡ ಅವರ ಕಾರು ಯಾದಗಿರಿ ನಗರದ ಗಂಜ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ತಡರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ, ಹಿಂದಿನಿಂದ ಬಂದ ಟ್ರಕ್ ಒಂದು ರಾಜು ಗೌಡ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಕಾರು ಭಾರೀ ಹಾನಿಗೊಳಗಾದರೂ, ಅದೃಷ್ಟವಶಾತ್ ಮಾಜಿ ಶಾಸಕ ರಾಜು ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸ್ವಲ್ಪ ತರಚಿದ ಗಾಯಗಳಾಗಿದ್ದು, ಗಂಭೀರ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಅಪಘಾತದ ನಂತರ ತಕ್ಷಣವೇ ರಾಜು ಗೌಡ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಯಾದಗಿರಿ | ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಹಣ ದೋಚಿದ ಕಳ್ಳರು
ಈ ಕುರಿತು ಮಾಧ್ಯಮಗಳೊಂದಿಗೆ ಮಾಜಿ ಶಾಸಕ ರಾಜು ಗೌಡ ಮಾತನಾಡಿ, ‘ಇಂದು ಮುಂಜಾನೆ ನಮ್ಮ ಕಾರು ಅಪಘಾತಕ್ಕೀಡಾಗಿತ್ತು. ಕಾರಿನ ಚಿತ್ರಗಳನ್ನು ನೋಡಿ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅನೇಕರು ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ದೇವರ ಕೃಪೆ ಹಾಗೂ ಜನರ ಆಶೀರ್ವಾದದಿಂದ ನಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆ. ಯಾರೂ ಆತಂಕಪಡಬೇಡಿ,’ ಎಂದು ತಿಳಿಸಿದ್ದಾರೆ.





