‘ಶಹಾಪುರ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಿಸಲು ಪ್ರಸ್ತಾವನೆ ಇದ್ದು, ಈ ನಿರ್ಣಾಯ ಈ ಕೂಡಲೇ ಕೈ ಬಿಡಬೇಕು’ ಎಂದು ದಸಂಸ ಮುಖಂಡ ವಿಶ್ವ ನಾಟೇಕಾರ್ ಆಗ್ರಹಿಸಿದ್ದಾರೆ.
‘ಈ ಕುರಿತು ದಸಂಸ ಭೀಮವಾದ ಜಿಲ್ಲಾಧ್ಯಕ್ಷ ವಿಶ್ವ ನಾಟೇಕಾರ್ ಪತಿಕಾ ಪ್ರಕಟಣೆ ಹೋರಡಿಸಿದ ಅವರು, ‘ರಾಜ್ಯದಲ್ಲೇ ಅತಿ ವಿಶಾಲ ಭೂವಿಸ್ತೀರ್ಣ ಹೊಂದಿರುವ ಈ ಕಾಲೇಜಿನಲ್ಲಿ ಪ್ರತಿವರ್ಷ 2000 ದಿಂದ 2500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇಂತಹ ಮಹತ್ವದ ಶೈಕ್ಷಣಿಕ ಆವರಣವನ್ನು ಆಡಳಿತಾತ್ಮಕ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿರುವುದು ಶಿಕ್ಷಣ ವಿರೋಧಿ ಕ್ರಮವಾಗಿದೆ’ ಎಂದು ಅವರು ಹೇಳಿದರು.
‘ಪ್ರಜಾಸೌಧ ನಿರ್ಮಾಣವಾದಲ್ಲಿ ವಿದ್ಯಾರ್ಥಿಗಳ ಶಾಂತ ಅಧ್ಯಯನ ವಾತಾವರಣಕ್ಕೆ ಗಂಭೀರ ಧಕ್ಕೆ ಉಂಟಾಗುವುದರ ಜೊತೆಗೆ, ಬಡ ರೈತ ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. ಕಾಲೇಜು ಆವರಣವು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಾಗಿದ್ದು, ಇಲ್ಲಿ ಸರ್ಕಾರಿ ಕಚೇರಿ ಅಥವಾ ಇತರೆ ಆಡಳಿತಾತ್ಮಕ ಕಟ್ಟಡಗಳನ್ನು ನಿರ್ಮಿಸುವುದರಿಂದ ಭವಿಷ್ಯದಲ್ಲಿ ಕಾಲೇಜಿನ ವಿಸ್ತರಣೆಗೆ ತೀವ್ರ ಅಡ್ಡಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಈ ಭೂಮಿಯಲ್ಲಿ ಈಗಾಗಲೇ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾಂಗಣ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಜಾಗದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಯ ಆವರಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಶಿಕ್ಷಣದ ಮೇಲೆ ದಾಳಿ ಮಾಡುವುದಕ್ಕೆ ಸಮಾನವಾಗಿದೆ’ ಎಂದು ಅವರು ಆರೋಪಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಪೆಟ್ರೋಲ್ ಸುರಿದುಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
‘ಈ ವಿಷಯದಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ ಅವರು, ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಿ, ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾದ ಭೂಮಿಯನ್ನು ಕೇವಲ ಶಿಕ್ಷಣಾಭಿವೃದ್ಧಿಗೆ ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.





