ಯಲ್ಲಾಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ, ಯಲ್ಲಾಪುರ ತಾಲೂಕಿನ ಏಳು ಮಂದಿ ನಿರುದ್ಯೋಗಿ ಯುವಕ-ಯುವತಿಯರಿಂದ ಒಟ್ಟು 8.70 ಲಕ್ಷ ರೂ. ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ರಾಯಚೂರು ಜಿಲ್ಲೆಯ ವ್ಯಕ್ತಿಯೊಬ್ಬನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ (38) ಎನ್ನುವ ವ್ಯಕ್ತಿಯೇ ವಂಚನೆ ಎಸಗಿದ ಆರೋಪಿಯಾಗಿದ್ದಾನೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯಾದ ಕೆಂಚಪ್ಪನು ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಶ್ರೀನಾಥ ಶ್ರೀಕಾಂತ ಕಳಸ ಮತ್ತು ಅವರ ಸ್ನೇಹಿತರನ್ನು ಸಂಪರ್ಕಿಸಿ, ತಾನು ಜಲ ಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳ ಪರಿಚಯ ಹೊಂದಿದ್ದೇನೆ, ನಿಮಗೆ ಅಲ್ಲಿ ಖಾಯಂ ಸರ್ಕಾರಿ ಹುದ್ದೆ ಕೊಡಿಸಬಹುದು ಎಂದು ಭರವಸೆ ನೀಡಿದ್ದಾನೆ. ಆತನ ಮಾತು ನಂಬಿದ ಶ್ರೀನಾಥ ಕಳಸ ಹಾಗೂ ಅವರ ಸ್ನೇಹಿತರಾದ ಗೊಗದ್ದೆ ಮಾವಿನಮನೆಯ ಗೌರೀಶ ಮರಾಶಾ, ಕಳಚೆಯ ರವಿ ಗೌಡ, ಹೆಗ್ಗಾರಗದ್ದೆಯ ಗಜಾನನ ಪಟಗಾರ, ಕಳಚೆಯ ಪ್ರಭಾಕರ ಗೌಡ, ತಳಕೆಬೈಲಿನ ಶ್ವೇತಾ ಮರಾಠಿ ಹಾಗೂ ವಜ್ರಳ್ಳಿಯ ರಾಮಚಂದ್ರ ಕೊಡಕಣಿಕರ ಅವರು ಹಂತ ಹಂತವಾಗಿ ಹಣ ನೀಡಿದ್ದಾರೆ.
ದೂರಿನ ಪ್ರಕಾರ, 2024ರ ನವೆಂಬರ್ 3ರಿಂದ 2025ರ ಮಾರ್ಚ್ 28ರವರೆಗೆ, ಆರೋಪಿಯು ಶ್ರೀನಾಥ ಮತ್ತು ಗೌರೀಶರಿಂದ 3.85 ಲಕ್ಷ ರೂ. ಹಾಗೂ ಉಳಿದವರಿಂದ 4.85 ಲಕ್ಷ ರೂ. ಸೇರಿ ಒಟ್ಟು 8.70 ಲಕ್ಷ ರೂ. ಪಡೆದುಕೊಂಡಿದ್ದಾನೆ. ಆದರೆ ಹಲವಾರು ತಿಂಗಳು ಕಳೆದರೂ ಯಾವುದೇ ಸರ್ಕಾರಿ ಹುದ್ದೆ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡ ಸಂತ್ರಸ್ತರು ಕೆಂಚಪ್ಪನನ್ನು ಸಂಪರ್ಕಿಸಿದಾಗ ಆತ ತಪ್ಪಿಸಿಕೊಂಡು ಕಾಲಹರಣ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಹೊನ್ನಾವರ | ಭೀಕರ ಅಪಘಾತ: ಕೆಎಸ್ಆರ್ಟಿಸಿ ಬಸ್ ಪಲ್ಟಿ – ಓರ್ವ ಸಾವು, ಹಲವರಿಗೆ ಗಾಯ
ಕೆಲಸವೂ ಕೊಡಿಸದೆ ಹಣವನ್ನೂ ಹಿಂತಿರುಗಿಸದೆ ಹೋಗಿದ್ದರಿಂದ ಭಯಗೊಂಡ ಸಂತ್ರಸ್ತರು ತಮ್ಮ ಕುಟುಂಬದವರ ಸಲಹೆಯೊಂದಿಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ಸಹಾಯಕ ಪೊಲೀಸ್ ಉಪನಿರೀಕ್ಷಕಿ ರೇಣುಕಾ ಬೆಳಗಟ್ಟಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





