ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಳ್ಳ ಹಾಗೂ ಬೆಡ್ತಿ ನಿಧಿಯಿಂದ ಈ ವರ್ಷದ ಪ್ರಾರಂಭದಲ್ಲಿ ತೆಗೆದ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟು ಅದನ್ನು ರಾತ್ರಿ ವೇಳೆಯಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಕಳಸೂರ–ಬಸಳೆಬೈಲ್ ಮಾರ್ಗದಿಂದ, ಹುಲಗೋಡ ರಸ್ತೆಯಿಂದ ಕೀರವತ್ತಿ ಗ್ರಾಮಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮೂಲಕ ಯಲ್ಲಾಪುರ ಪಟ್ಟಣಕ್ಕೆ ಸಂಪರ್ಕಿಸುವ ಮಾರ್ಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉಸುಕನ್ನು ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಪ್ರತಿದಿನ ಮಧ್ಯರಾತ್ರಿಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಟ್ರ್ಯಾಕ್ಟರ್ಗಳ ಮೂಲಕ ಉಸುಕನ್ನು ಅಕ್ರಮವಾಗಿ ಶೇಖರಿಸಿಟ್ಟ ಸ್ಥಳದಿಂದ ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವುದು ಕಂಡುಬರುತ್ತಿದೆ. ಕೆಲವು ಗ್ರಾಮಸ್ಥರು ಈ ಬಗ್ಗೆ ವೀಡಿಯೋ ದೃಶ್ಯಾವಳಿಗಳನ್ನೂ ಸೆರೆಹಿಡಿದಿದ್ದಾರೆ. ಈ ಭಾಗದಲ್ಲಿ ಚೆಕ್ಪೋಸ್ಟ್ಗಳು ಇದ್ದರೂ, ಅವು ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿದಿನ ಅದೇ ಮಾರ್ಗದಲ್ಲಿ ಟ್ರ್ಯಾಕ್ಟರ್ಗಳು ಅಕ್ರಮ ಮರಳನ್ನು ಸಾಗಿಸುತ್ತಿದ್ದರೂ ತಪಾಸಣೆ ನಡೆಸುವುದಿಲ್ಲ. ಟ್ರ್ಯಾಕ್ಟರ ಮತ್ತು ಮರಳನ್ನು ಸಾಗಿಸುವ ವಾಹನಗಳಲ್ಲಿ ಮರಳನ್ನು ಅಷ್ಟೇ ಸಾಗಿಸುತ್ತಿದ್ದಾರ ಅಥವಾ ಬೆಲೆ ಬಾಳುವ ಅರಣ್ಯದ ಮರಗಳನ್ನು ಕಡಿದು ಅದರಲ್ಲಿ ಸಾಗಿಸುತ್ತಿದ್ದಾರ ಎಂಬ ಅನುಮಾನವಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಇಲಾಖೆಯನ್ನು ದೂರುತ್ತಿದ್ದಾರೆ.
ಮರಳನ್ನು ಅಕ್ರಮವಾಗಿ ತೆಗೆದು ಸಾಗಿಸುವ ಕ್ರಿಯೆಯಿಂದ ಸುತ್ತಮುತ್ತಲಿನ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಳ್ಳಗಳ ಮೂಲ ಸ್ವರೂಪ ನಾಶವಾಗುವುದರ ಜೊತೆಗೆ, ಸಾಮರ್ಥ್ಯಕ್ಕಿಂತ ಹೆಚ್ಚು ಉಸುಕನ್ನು ಟ್ರ್ಯಾಕ್ಟರ್ಗಳಲ್ಲಿ ತುಂಬಿ ವೇಗವಾಗಿ ಚಲಿಸುವುದರಿಂದ ಹಲವೆಡೆ ರಸ್ತೆಗಳು ಹಾಳಾಗುತ್ತಿವೆ ಎಂದು ಪ್ರತಿದಿನ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸ್ಥಳೀಯರು ತಿಳಿಸಿದ್ದಾರೆ. ಜೊತೆಗೆ, ರಾತ್ರಿ ವೇಳೆ ಟ್ರ್ಯಾಕ್ಟರ್ಗಳ ನಿರಂತರ ಸಂಚಾರದಿಂದ ರಸ್ತೆ ಪಕ್ಕದ ಮನೆಗಳಿಗೆ ಶಬ್ದ ಕಿರಿಕಿರಿ ಉಂಟಾಗುತ್ತಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ: 24 ಗಂಟೆಯೊಳಗೆ ಕಳ್ಳತನ ಪ್ರಕರಣ ಭೇದಿಸಿದ ಶಹರ ಠಾಣೆ ಪೊಲೀಸರು
ಇಷ್ಟೆಲ್ಲಾ ಅಕ್ರಮ ಚಟುವಟಿಕೆಗಳು ಪ್ರತಿದಿನ ನಡೆಯುತ್ತಿದ್ದರೂ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಇಲಾಖೆಯ ಮೇಲೆ ಪ್ರಶ್ನೆಗಳು ಏಳುತ್ತಿವೆ. “ಪ್ರತಿದಿನ ಉಸುಕನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ, ನಾವು ತಿಳಿಸಿದ್ದರೂ ಯಾರೂ ತಡೆಹಿಡಿಯಲು ಮುಂದೆ ಬರ್ತಿಲ್ಲ. ನಮ್ಮ ಮುಂದೆ ನಡೆಯುತ್ತಿರೋದನ್ನೇ ನೋಡಿ ಅಧಿಕಾರಿಗಳಿಗೆ ತಿಳಿಸಿದರು ಕ್ರಮ ಕೈಗೊಳ್ಳುತ್ತಿಲ್ಲ” ಅಕ್ರಮವಾಗಿ ದಾಸ್ತಾನು ಮಾಡಿಟ್ಟಿರುವ ಮರಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳದೆ ಇರುವುದಕ್ಕೆ ಕಾರಣವೇನು. ಕಳೆದ ವರ್ಷ ದಾಸ್ತಾನು ಮಾಡಿಟ್ಟ ಮರಳನ್ನು ಅಕ್ರಮವಾಗಿ ಮಾರಾಟಮಾಡಿ ಖಾಲಿ ಆದ ನಂತರ ಮತ್ತೆ ಮುಂದಿನ ದಿನಗಳಲ್ಲಿ ಹಳ್ಳ ಕೊಳ್ಳ ಗಳಿಂದ ಮತ್ತೆ ಮರಳನ್ನು ತೆಗೆಯುತ್ತಾರೆ. ಇದರ ಬಗ್ಗೆ ಅಧಿಕಾರಿಗಳು ಈಗಲಾದರೂ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮವಾಗಿ ಶೇಖರಿಸಿಟ್ಟ ಮರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಬೇಡಿಕೆ: ಅಕ್ರಮ ಮರಳುಗಾರಿಕೆಗೆ ತಡೆಯಲು ನಿಷ್ಕ್ರಿಯವಾಗಿರುವ ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಬೇಕು. ಹಳ್ಳದ ತೀರಗಳಲ್ಲಿ ಗಸ್ತು ತಿರುಗುವಂತೆ ಸಿಬ್ಬಂದಿಗೆ ಸೂಚನೆ ನೀಡಬೇಕು ಹಾಗೂ ಅರಣ್ಯ ಸಂಪತ್ತನ್ನು ಕಾಪಾಡಬೇಕು. ಇಲ್ಲವಾದರೆ ಹಳ್ಳಗಳ ಮೂಲ ಸ್ವರೂಪವೇ ಹಾನಿಗೊಳಗಾಗಿ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ನೀರು ಸಿಗದೆ ವನ್ಯಜೀವಿಗಳು ಗ್ರಾಮಗಳತ್ತ ಬರುತ್ತವೆ ಎಂಬ ಆತಂಕವಿದೆ. ಆದ್ದರಿಂದ ಅರಣ್ಯ ಇಲಾಖೆಯ ಮೇಲಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





