ಯಲ್ಲಾಪುರ: ಉದ್ಯೋಗ ಮೇಳಗಳು ಯುವಕರ ಬದುಕಿನ ದಿಕ್ಕು ಬದಲಿಸುವ ಶಕ್ತಿಯುತ ವೇದಿಕೆಗಳು. ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಯುವಕರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಕರೆ ನೀಡಿದರು.
ಅವರು ಶನಿವಾರ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ತಾಲೂಕು ಪಂಚಾಯಿತಿ ಯಲ್ಲಾಪುರ ಹಾಗೂ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾ ಅಧಿಕಾರಿ ಜಿ.ಸತೀಶ್, ಯುವಕ–ಯುವತಿಯರ ಉದ್ಯೋಗಾರ್ಹತೆಯನ್ನು ಹೆಚ್ಚಿಸಿ, ಅವರು ಸ್ವಾವಲಂಬನೆಯತ್ತ ಮುನ್ನಡೆಯಲು ಈ ಮೇಳ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಆರ್.ಡಿ. ಜನಾರ್ಧನ್ ಮಾತನಾಡಿ, ಉದ್ಯೋಗ ಮೇಳಗಳು ಪದವಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ಪದವಿ ಹಂತದಲ್ಲಿಯೇ ಉದ್ಯೋಗಾವಕಾಶಗಳ ಪರಿಚಯ ನೀಡುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಬಿಸಿಯೂಟದಿಂದ 44 ಮಕ್ಕಳು ಅಸ್ವಸ್ಥ: ಅಧಿಕಾರಿಗಳಿಂದ ಆಸ್ಪತ್ರೆಗೆ ಭೇಟಿ, ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್
ಒಟ್ಟು ಭಾಗವಹಿಸಿದ ಉದ್ಯೋಗಾಕಾಂಕ್ಷಿಗಳು 1735, ಭಾಗವಹಿಸಿದ ಕಂಪನಿಗಳು 63, ಅಂತಿಮವಾಗಿ ಆಯ್ಕೆಯಾದವರು 345, ಮುಂದಿನ ಹಂತದ ಸಂದರ್ಶನಕ್ಕೆ ಶಾರ್ಟ್ಲಿಸ್ಟ್ ಆದವರು 482, ಅದರಲ್ಲಿ 85 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಯಿತುಮೇಳದಲ್ಲಿ ಜಿಲ್ಲೆಯ ಪ್ರಮುಖ ಕಂಪನಿಗಳು, ವಿವಿಧ ಸಂಸ್ಥೆಗಳು ಹಾಗೂ ಕೌಶಲ್ಯಾಭಿವೃದ್ಧಿ ಘಟಕಗಳು ಭಾಗವಹಿಸಿ, ಯುವಕರಿಗೆ ಉದ್ಯೋಗ ಪರಿಚಯ ಮತ್ತು ನೇಮಕಾತಿಗೆ ಉತ್ತಮ ವೇದಿಕೆ ಒದಗಿಸಿದವು. ಉದ್ಯೋಗಾಕಾಂಕ್ಷಿಗಳಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರಿಗೆ ಹೊಸ ಭವಿಷ್ಯದ ಭರವಸೆ ಮೂಡಿಸಿತು.
ಉದ್ಯೋಗ ಮೇಳದಲ್ಲಿ ತಾಲೂಕು ಪಂಚಾಯಿತಿ ಯಲ್ಲಾಪುರದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವಿಜಯ್ ಮಿರಾಶಿ, ಜಿಲ್ಲಾ ವ್ಯವಸ್ಥಾಪಕರು (ಕೌಶಲ್ಯ) ವಿಜಯಕುಮಾರ್ ಹೆಗಡೆ, ಸಚಿನ್ ನಾಯ್ಕ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.





