ಯಲ್ಲಾಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭತ್ತದ ಬೆಳೆಗೆ ಕೀಟಗಳು ಹಾಗೂ ರೋಗಗಳ ಬಾಧೆ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆ ರೈತರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಕಟಣೆನೀಡಿದೆ. ತಾಲ್ಲೂಕಿನ ಮಂಚಿಕೇರಿ, ಕೆರೆಹೊಸಳ್ಳಿ, ಬಿದ್ರಳ್ಳಿ, ಉಮ್ಮಚಗಿ, ತೋಳಗೋಡ, ಹೆಮ್ಮಾಡಿ, ಭರಣಿ ಮತ್ತು ಭರತನಹಳ್ಳಿ ಗ್ರಾಮಗಳಲ್ಲಿ ಭತ್ತದ ಬೆಳೆ ಕಟಾವು ಹಂತದಲ್ಲಿ ಇದೆ ಈ ಸಂದರ್ಭದಲ್ಲಿ ಭತ್ತದ ಹೊಲಗಳಲ್ಲಿ ಕಂದುಜಿಗಿ ಹುಳು, ಎಲೆಸುರುಳಿ ಹುಳುಗಳ ಜೊತೆಗೆ ಬೆಂಕಿರೋಗದ ಬಾಧೆ ಭತ್ತದ ಜಮೀನಿನಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಕಾರದಿಂದ ಕೃಷಿ ಇಲಾಖೆ ಸಿಬ್ಬಂದಿ ಈಚೆಗೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರಿಗೆ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಶಿಫಾರಸು ಮಾಡಿದ್ದಾರೆ.
ಕಂದುಜಿಗಿ ಹುಳು ಬಾಧಿತ ಹೊಲಗಳಲ್ಲಿ ಗದ್ದೆಗೆ ನೀರು ಕಡಿಮೆ ಇರಿಸುವಂತೆ ಸಲಹೆ ನೀಡಿದ್ದು, ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್ (0.3 ಮಿಲಿ/ಲೀಟರ್ ನೀರು) ಅಥವಾ ಥಯೋಮೆಥಾಕ್ಸಾಮ್ (0.5 ಗ್ರಾಂ/ಲೀಟರ್ ನೀರು) ಅಥವಾ ಬುಪ್ರೋಪಿಜಿನ್ (1.5 ಮಿಲಿ/ಲೀಟರ್ ನೀರು) ಬಳಸಿ ಎಕರೆಗೆ 200 ಲೀಟರ್ ದ್ರಾವಣ ತಯಾರಿಸಿ ಭತ್ತದ ಸಸಿಗಳು ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕೆಂದು ಸೂಚಿಸಲಾಗಿದೆ.
ಎಲೆಸುರುಳಿ ಕೀಟದ ನಿಯಂತ್ರಣಕ್ಕಾಗಿ ಪ್ರೊಫೆನೊಫಾಸ್ 50 ಇಸಿ (2 ಮಿಲಿ/ಲೀಟರ್) ಅಥವಾ ಕ್ಲೋರೋಪೈರಿಪಾಸ್ 20 ಇಸಿ (2 ಮಿಲಿ/ಲೀಟರ್) ಅಥವಾ ಕ್ವಿನಾಲ್ಫಾಸ್ 25 ಇಸಿ (2 ಮಿಲಿ/ಲೀಟರ್) ಬೆರೆಸಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣವನ್ನು ಸಿಂಪಡಿಸಬೇಕೆಂದು ಸಲಹೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ಸಿನಿಮೀಯ ರೀತಿ ದರೋಡೆ ಯತ್ನ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಅದೇ ರೀತಿ, ಕಾಂಡ ಕೊರೆಯುವ ಹುಳುವಿನ ಹತೋಟಿಗಾಗಿ ಈ ಮೂರರಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು 2 ಮಿಲಿ ಪ್ರಮಾಣದಲ್ಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ಅಧಿಕಾರಿಗಳು ರೈತರಿಗೆ ತಿಳಿಸಿದರು. ಕೃಷಿ ಇಲಾಖೆ ರೈತರಿಗೆ ನಿಯಮಿತವಾಗಿ ಹೊಲಗಳ ಪರಿಶೀಲನೆ ನಡೆಸಿ, ಬಾಧೆ ತೀವ್ರವಾಗುವ ಮುನ್ನವೇ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.





