ಯಲ್ಲಾಪುರ: ಆಸ್ತಿ ವಿವಾದ ಹಾಗೂ ಕುಟುಂಬ ಕಲಹದ ಹಿನ್ನೆಲೆಯಲ್ಲಿನ ಜಗಳ ತಂದೆಯ ಸಾವಿನಲ್ಲಿ ದಾರುಣ ಅಂತ್ಯ ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬೆಳ್ಳುಂಬಿ ಸಮೀಪದ ಮಾವಿನಕಟ್ಟಾದಲ್ಲಿ ನಡೆದಿದೆ. ಸ್ವಂತ ಮಗನೇ ಕೊಡಲಿಯಿಂದ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ.
ಮೃತ ದುರ್ದೈವಿಯನ್ನು ನಾರಾಯಣ ಪರಶು ಮರಾಠಿ (51) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪುತ್ರ ಹರೀಶ ಮರಾಠಿ (29) ಕೃತ್ಯದ ನಂತರ ಸ್ಥಳದಿಂದ ಪರಾರಿಯಾದರೂ ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ತಂದೆ, ಪುತ್ರ ಹಾಗೂ ಪುತ್ರಿ ತಾರಾ ಮರಾಠಿ ಒಂದೇ ಮನೆಯಲ್ಲಿ ವಾಸವಾಗಿದ್ದು, ಆರೋಪಿ ಹರೀಶ ತೋಟದ ಕೆಲಸ ಮಾಡುತ್ತ ಜೀವನ ನಿರ್ವಹಿಸುತ್ತಿದ್ದ.
ಪತ್ನಿ ಸವಿತಾ ಮತ್ತು ಮಗಳು ಸುರಕ್ಷಾ ಜೊತೆಗೆ ವಾಸವಿದ್ದರೂ ಅಡುಗೆ ಪ್ರತ್ಯೇಕವಾಗಿತ್ತು. ಕುಟುಂಬದೊಳಗೆ ಆಗಾಗ ಕಲಹಗಳು ನಡೆಯುತ್ತಿದ್ದವು. ಘಟನೆಯ ದಿನ ಬೆಳಿಗ್ಗೆ ಸಹೋದರಿ ತಾರಾ ಹಾಗೂ ಪತ್ನಿ ಸವಿತಾ ನಡುವೆ ಜಗಳ ನಡೆದದ್ದು, ಆ ವೇಳೆಯಲ್ಲಿ ಹರೀಶ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ತಂದೆ ನಾರಾಯಣ ಮಗನಿಗೆ ತರಾಟೆ ತೆಗೆದುಕೊಂಡು, “ನಿನ್ನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇನೆ” ಎಂದು ಎಚ್ಚರಿಸಿದ್ದಂತೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸಣ್ಣವರ ಬಂಧನ, ದೊಡ್ಡವರಿಗೆ ರಕ್ಷಣೆ: ಮಟ್ಕಾ, ಇಸ್ಪಿಟ್ ದಂಧೆಯ ಹಿಂದಿರುವ ಕಾಣದ ಕೈ ಯಾವುದು?
ಹರೀಶ ಮನೆ, ಸಾಲ ಮತ್ತು ಮದುವೆಯ ಹೊಣೆಗಾರಿಕೆ ತಾನೇ ತೀರಿಸಿದ್ರೂ ಆಸ್ತಿ ಕೊಡಲಿಲ್ಲ ಎಂಬ ಆಕ್ರೋಶದಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿದ. ಈ ವೇಳೆ ಎಡ ಕಿವಿ ಭಾಗಕ್ಕೆ ಕೊಡಲಿಯೇಟು ಬಿದ್ದ ಪರಿಣಾಮ ನಾರಾಯಣ ಮರಾಠಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಾರಾ ಮರಾಠಿ ತಕ್ಷಣ ತಂದೆಯನ್ನು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ನಾರಾಯಣ ಮೃತಪಟ್ಟಿದ್ದರು. ಕೊಲೆ ಬಳಿಕ ಪರಾರಿಯಾಗಿದ್ದ ಹರೀಶನನ್ನು ಪೊಲೀಸರು ಸಂಜೆ ಬಂಧಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





