ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ನಡೆದಿದ್ದ ಮಹಿಳೆಯ ಭೀಕರ ಕೊಲೆ ಪ್ರಕರಣದ ಬೆನ್ನಲ್ಲೇ, ತಲೆಮರೆಸಿಕೊಂಡಿದ್ದ ಆರೋಪಿ ಕಾಜಲವಾಡದ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಶನಿವಾರ ಮಧ್ಯಾಹ್ನ ನಡೆದಿದ್ದ ಈ ಕೃತ್ಯದ ನಂತರ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಭಾನುವಾರ ಬೆಳಿಗ್ಗೆ ಆರೋಪಿ ರಫೀಕ್ ಇಮಾಮ್ಸಾಬ್ ಯಳ್ಳೂರ (30) ಎಂಬಾತನ ಶವ ಕಾಡಿನಲ್ಲಿ ಪತ್ತೆಯಾಗುವುದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಘಟನೆಯ ವಿವರ ಮತ್ತು ಹಿನ್ನೆಲೆ: ಮೃತ ಮಹಿಳೆಯನ್ನು ರಂಜೀತಾ ಬನಸೋಡೆ (31) ಎಂದು ಗುರುತಿಸಲಾಗಿದೆ. ರಂಜೀತಾ ಅವರಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಹತ್ತು ವರ್ಷದ ಮಗನಿದ್ದಾನೆ. ಆದರೆ ಪತಿಯೊಂದಿಗೆ ಹೊಂದಾಣಿಕೆ ಇಲ್ಲದ ಕಾರಣ ಕೆಲವು ವರ್ಷಗಳಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದು ತವರು ಮನೆಯಲ್ಲೇ ವಾಸವಿದ್ದರು.

ತಂದೆ-ತಾಯಿಯ ಜೊತೆಗಿದ್ದ ಇವರು ರಾಮಪುರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಪೊಲೀಸ್ ದೂರಿನ ಪ್ರಕಾರ, ಆರೋಪಿ ರಫೀಕ್ ಮತ್ತು ರಂಜೀತಾ ಶಾಲಾ ದಿನಗಳ ಸ್ನೇಹಿತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ರಫೀಕ್ ರಂಜೀತಾಗೆ ಪ್ರೀತಿಯ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದನು.

ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಈತನ ನಡವಳಿಕೆಯನ್ನು ರಂಜೀತಾ ಹಲವು ಬಾರಿ ಖಂಡಿಸಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ ರಂಜೀತಾ ಅವರ ಕುಟುಂಬಸ್ಥರು ಕೂಡ ರಫೀಕ್ಗೆ ಬುದ್ಧಿ ಹೇಳಿ ಕಳುಹಿಸಿದ್ದರು. ಇದರಿಂದಾಗಿ ಕೆಲ ದಿನಗಳಿಂದ ರಫೀಕ್ ಜೊತೆ ರಂಜೀತಾ ಮಾತುಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.
ಮಾತು ಬಿಟ್ಟಿದ್ದರಿಂದ ದ್ವೇಷ ಸಾಧಿಸಿದ ಆರೋಪಿ ರಫೀಕ್, ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಂಜೀತಾ ಅವರು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಅಡ್ಡಗಟ್ಟಿದ್ದಾನೆ. ಈ ವೇಳೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ರಫೀಕ್ ಹರಿತವಾದ ಆಯುಧದಿಂದ ರಂಜೀತಾ ಅವರ ಕುತ್ತಿಗೆಗೆ ಇರಿದು ಪರಾರಿಯಾಗಿದ್ದನು.
ತೀವ್ರವಾಗಿ ಗಾಯಗೊಂಡಿದ್ದ ರಂಜೀತಾ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕೊಲೆ ನಡೆದ ನಂತರ ಆರೋಪಿ ಕಾಜಲವಾಡದ ಅರಣ್ಯ ಪ್ರದೇಶದತ್ತ ಓಡಿ ಹೋಗಿದ್ದನು. ಪೊಲೀಸರು ಆತನನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಅಸ್ಪೃಶ್ಯತೆ ಆಚರಣೆ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಡಿವೈಎಸ್ಪಿಗೆ ಪತ್ರ
ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಯಲ್ಲಾಪುರ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯನ್ನು ವಿವಿಧ ಸಂಘಟನೆಗಳು ಇಂದು ಯಲ್ಲಾಪುರ ಬಂದ್ ಗೆ ಕರೆ ನೀಡಿದ್ದರು. ಆದ್ದರಿಂದ ಇಂದು ಬೆಳಿಗ್ಗೆಯಿಂದಲೇ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಪೊಲೀಸರು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.





