ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕು ಮಲೆ ಮಹದೇಶ್ವರ ಬೆಟಕ್ಕೆ ಪಾದಯಾತ್ರೆ ಮೂಲಕ ತೆರಳುತಿದ್ದ ಯುವಕ ಪ್ರವೀಣ್ ಮೇಲೆ ಚಿರತೆ ದಾಳಿ ನಡೆಸಿದ ಪ್ರಕರಣ ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ರಸ್ತೆ ತಡೆ ನಡೆಸಿದೆ.
ರಾಜ್ಯ ಸಮಿತಿ ಸದಸ್ಯರಾದ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬುದುವಾರ ಸಂಜೆ ಪೊನ್ನಾಚಿ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ, ಅರಣ್ಯ ಇಲಾಖೆಯವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು. ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹಾಗಾಗಿ, ಬೇರೆ ಕಡೆಯಿಂದ ಚಿರತೆ ಮತ್ತು ಹುಲಿಗಳನ್ನು ತಂದು ಮಹದೇಶ್ವರ ಬೆಟ್ಟ ಅರಣ್ಯ ವಲಯಕ್ಕೆ ಬಿಡುತ್ತಿದ್ದಾರೆ. ಇದೇ ರೀತಿ ಮಾಡಿ ಮುಂದಿನ ದಿನಗಳಲ್ಲಿ ಭಕ್ತಾದಿಗಳು ಪಾದಯಾತ್ರೆ ಮಾಡುವುದಕ್ಕೆ ಅಡ್ಡಿಪಡಿಸಿ, ಕಾನೂನುಗಳನ್ನು ತರುತ್ತಾರೆ. ಹಾಗೆ, ಅರಣ್ಯದ ಒಳಗೆ ಯಾರು ಓಡಾಡಬಾರದು ಎಂಬುದು ಇವರುಗಳ ಅಜೆಂಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವೆಲ್ಲವನ್ನೂ ಪೂರ್ವ ಯೋಜಿತವಾಗಿಯೇ ಮಾಡುತಿದ್ದು, ಒಟ್ಟಾರೆಯಾಗಿ ಕಾಡು ಪ್ರಾಣಿಗಳ ಹೆಸರಿನಲ್ಲಿ ಮಲೆ ಮಹದೇಶ್ವರ ಬೆಟ್ಟದ ಹಿಡಿತ ಸಾಧಿಸಲು ಹೊರಟಿದ್ದಾರೆ. ಹಾಗಾಗಿ, ಇಂತಹ ಅಧಿಕಾರಿಗಳ ನಡೆಗೆ ನಮ್ಮೆಲ್ಲರ ದಿಕ್ಕಾರ. ಸರ್ಕಾರಗಳು ಸಹ ತಮಗೆ ಏನು ತಿಳಿಯದಂತೆ ವರ್ತಿಸುತ್ತಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುತ್ತಾರೆ. ಇಂತಹ ಸಂದರ್ಭಗಳಲಿ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಹಾಗು ರಾತ್ರಿ ವೇಳೆ ಸಂಚಾರದ ಕುರಿತಾಗಿ ಅರಿವು ಮೂಡಿಸಬೇಕು. ಇದೇನು ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಲೆ ಮಹದೇಶ್ವರ ಬೆಟ್ಟ | ಚಿರತೆ ದಾಳಿಗೆ ಯುವಕ ಬಲಿ; 21 ರಿಂದ 24ರವರೆಗೆ ಕಾಲ್ನಡಿಗೆ, ದ್ವಿಚಕ್ರವಾಹನ ಸವಾರಿ ನಿರ್ಬಂಧ
ಚಿರತೆ ದಾಳಿಯಿಂದ ಮಂಡ್ಯ ಮೂಲದ ಪ್ರವೀಣ್ ಮೃತಪಟ್ಟಿದ್ದಾನೆ, ಇದರ ಹೊಣೆ ಹೊತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬೀಟ್ ಫಾರೆಸ್ಟರ್ ಭಾಸ್ಕರ್, ಎಎಸ್ಪಿ ಶಶಿಧರ್ ಭೇಟಿ ನೀಡಿ ಪ್ರತಿಭಟನಾಕಾರರ ಮಾತನ್ನು ಆಲಿಸಿ, ಸೂಕ್ತ ಕ್ರಮ ವಹಿಸಿ, ಸಂಬಂಧಪಟ್ಟವರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು ಜಿಲ್ಲೆಯಾದ್ಯಂತ 18 ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು; ಅನರ್ಹತೆಗೆ ಕಾರಣಗಳೇನು?

ಪ್ರತಿಭಟನೆಯಲ್ಲಿ ಚಂಗಡಿ ಕರಿಯಪ್ಪ, ಗುಂಡ್ಲುಪೇಟೆ ಮಹೇಶ್, ಬೇರಂಬಾಡಿ ಶಶಿ, ಚಾಮರಾಜನಗರ ಮೂಡ್ನಾಕೂಡು ನಿಜಗುಣ, ಪೊನ್ನಾಚಿ ರಾಜು ಹಾಗೂ ಪೊನ್ನಾಚಿ, ಅಸ್ತೂರಿನ ರೈತ ಸಂಘಟನೆಯ ಕಾರ್ಯಕರ್ತರು ಇದ್ದರು.





