ಚಾಮರಾಜನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಉದ್ಯೋಗ ಮತ್ತು ಜೀವನೋಪಾಯದ ಶ್ರೇಷ್ಠತಾ ಕೇಂದ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯ ಉದ್ಯಮಶೀಲರಿಗಾಗಿ ಆಯೋಜಿಸಲಾಗಿದ್ದ ಬಿಸಿನೆಸ್ ಎಕ್ಸಲೆನ್ಸ್ ಕಾರ್ಯಾಗಾರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಜಿಲ್ಲೆಯ ಯುವಜನರು ಉದ್ಯಮ ಅವಕಾಶಗಳ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಚಟುವಟಿಕೆ ಕೈಗೊಳ್ಳಲು ಹಣಕಾಸು ಸಂಸ್ಥೆಗಳು ಸಾಲ ಸೌಲಭ್ಯ ಒದಗಿಸಲಿವೆ. ಯುವಜನರು ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉದ್ಯಮ ಸ್ಥಾಪನೆಗೆ ಆಸಕ್ತಿ ತೋರಬೇಕು. ಇದರಿಂದ, ಜಿಲ್ಲೆಯ ಪ್ರಗತಿಗೂ ಅನುಕೂಲವಾಗಲಿದೆ. ಉದ್ಯಮಶೀಲರಾಗಲು ಬಯಸುವರಿಗಾಗಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿದರೆ ಹೆಚ್ಚಿನ ಮಾರ್ಗದರ್ಶನ ಪಡೆಯಬಹುದು. ಉದ್ಯಮಶೀಲರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ಉದ್ಯಮದಲ್ಲಿ ತೊಡಗಲು ಸಹಕಾರಿಯಾಗಲಿದೆ. ವಿವಿಧ ಸಂಸ್ಥೆಗಳು ಉದ್ಯಮಶೀಲ ಆಕಾಂಕ್ಷಿಗಳಿಗೆ ನೆರವಾಗಲಿವೆ ಎಂದರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗುವಂತೆ ವೋಲ್ವೋ ಗ್ರೂಪ್ ಹೂಡಿಕೆ ಅವಕಾಶಗಳನ್ನು ಪರಿಶೀಲಿಸಬೇಕೆಂದು ಆಹ್ವಾನಿಸಿದ ಜಿಲ್ಲಾಧಿಕಾರಿಯವರು ಇಂದಿನ ಕಾರ್ಯಕ್ರಮವು ಸಿಐಐ-ಸಿಇಎಲ್ ಮೂಲಕ ವೋಲ್ವೋ ಗ್ರೂಪ್ ಸಿಎಸ್ಆರ್ ಅನುದಾನದ ನೆರವಿನಿಂದ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.
ವೋಲ್ವೋ ಗ್ರೂಪ್ನ ಸಿಎಸ್ಆರ್ ನಿರ್ದೇಶಕ ಜಿ.ವಿ. ರಾವ್ ಮಾತನಾಡಿ, ಸಿಐಐ-ಸಿಇಎಲ್ ಮತ್ತು ಸಿಎಸ್ಆರ್ ಮೂಲಕ ಸಂಸ್ಥೆಯು ದೇಶಾದ್ಯಂತ ಸೂಕ್ಷ್ಮ ಉದ್ಯಮಗಳನ್ನು ಬೆಂಬಲಿಸುತ್ತಿದೆ. ಉದ್ಯಮಶೀಲರು ಕಲಿಕೆಯನ್ನು ಒಂದು ತಂತ್ರಾತ್ಮಕ ಹೂಡಿಕೆಯಾಗಿ ನೋಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿಯೂ ಸೂಕ್ಷ್ಮ ಉದ್ಯಮಗಳ ಬೆಳವಣಿಗೆಗೆ ವೋಲ್ವೋ ಗ್ರೂಪ್ ಬೆಂಬಲ ನೀಡಲಿದೆ ಎಂದರು.

ಮೈಸೂರು ವಲಯ ಮಂಡಳಿಯ ಅಧ್ಯಕ್ಷರು ಹಾಗೂ ಆಟೋಮೊಟಿವ್ ಆಕ್ಸಲ್ಸ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ನಿರ್ದೇಶಕರಾದ ನಾಗರಾಜ ಗರ್ಗೇಶ್ವರಿ ಮಾತನಾಡಿ, ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು. ಉದ್ಯಮಶೀಲರು ವ್ಯವಸ್ಥಿತವಾಗಿ ಸಾಮಥ್ರ್ಯ ವೃದ್ಧಿ, ಮಾರ್ಗದರ್ಶನ ಮತ್ತು ಕೈಗಾರಿಕಾ ಅನುಭವದಿಂದ ಹೇಗೆ ಲಾಭ ಪಡೆಯಬಹುದು ಎಂಬುದನ್ನು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಹೆಗ್ಗಡಪುರ ಗ್ರಾಮದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ದೊರೈರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೆಗೌಡ, ಸಿಐಐ ಸೆಲ್ ತಂಡದ ಪಿ. ಹರಿಹರನ್, ಸಯಾನಿ ಚಟರ್ಜಿ, ಸಿಎಸ್ಆರ್ ಜಿಲ್ಲಾ ಸಂಯೋಜಕಿ ರಕ್ಷಿತಾ ನಾಯಕ್ ಕಾರ್ಯಕ್ರಮದಲ್ಲಿ ಇದ್ದರು.





