ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ, ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹಿರನಡೆದರು. ಅವರನ್ನು ಕೆಲವರು ಅಪ್ಪಿಕೊಂಡಿದ್ದರಿಂದ ಅವರು ಕೋಪಗೊಂಡು ಕ್ರೀಡಾಂಗಣ ತೊರೆದರು ಎಂದು ಕಾರ್ಯಕ್ರಮದ ಪ್ರಮುಖ ಆಯೋಜಕ ಸತಾದ್ರು ದತ್ತಾ ಹೇಳಿರುವುದಾಗಿ ವರದಿಯಾಗಿದೆ..
ಡಿಸೆಂಬರ್ 13 ರಂದು ಕೋಲ್ಕತ್ತಾದಲ್ಲಿ ಮೆಸ್ಸಿ ಅವರ ಪ್ರತಿಮೆ ಅನಾವರಣ ಮತ್ತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆಸ್ಸಿಯನ್ನು ನೋಡಲು ಅಭಿಮಾನಿಗಳು ಸಾವಿರಾರು ರೂಪಾಯಿ ಹಣತೆತ್ತು, ಟಿಕೆಟ್ ಖರೀದಿಸಿ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ, ಮೆಸ್ಸಿ ಅವರನ್ನು ಕೆಲವು ಪ್ರಭಾವಿಗಳು ಮತ್ತು ರಾಜಕಾರಣಿಗಳು ಸುತ್ತುವರಿದಿದ್ದರಿಂದ ಅವರನ್ನು ನೋಡಲಾಗದೆ,ಅಭಿಮಾನಿಗಳು ಆಕ್ರೋಶಸ ವ್ಯಕ್ತಪಡಿಸಿದ್ದರು. ಕ್ರೀಡಾಂಗಣದ ಕುರ್ಚಿಗಳನ್ನು ಮುರಿದು, ಹಾನಿ ಮಾಡಿದ್ದರು. ಅಂದಿನ ಅವ್ಯವಸ್ಥೆ ಕುರಿತು ತನಿಖೆ ನಡೆಸಲು ಸರ್ಕಾರವು ಎಸ್ಐಟಿ ರಚಿಸಿದೆ.
ಪ್ರಕರಣದ ತನಿಖೆ ಆರಂಭಿಸಿರುವ ಎಸ್ಐಟಿ, ಪ್ರಮುಖ ಆಯೋಜಕ ಸುತಾದ್ರು ದತ್ತಾ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ. ಈ ವೇಳೆ, “ಕೆಲವರು ಮೆಸ್ಸಿ ಅವರನ್ನು ಟಚ್ ಮಾಡಿದ್ದರಿಂದ ಮತ್ತು ಅಪ್ಪಿಕೊಂಡಿದ್ದರಿಂದ ಅವರು ಆಕ್ರೋಶಗೊಂಡು ಅಲ್ಲಿಂದ ತೆರಳಿದರು” ಎಂದು ದತ್ತಾ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
“ಮೆಸ್ಸಿ ಅವರಿಗೆ ತಮ್ಮ ಬೆನ್ನನ್ನು ಮುಟ್ಟುವುದು ಅಥವಾ ಅಪ್ಪಿಕೊಳ್ಳುವುದು ಇಷ್ಟವಿಲ್ಲ. ಈ ಬಗ್ಗೆ ಅವರೊಂದಿಗೆ ಬಂದಿದ್ದ ವಿದೇಶಿ ಭದ್ರತಾ ಅಧಿಕಾರಿಗಳು ಮುಂಚಿತವಾಗಿಯೇ ತಿಳಿಸಿದ್ದರು” ಎಂದು ದತ್ತಾ ವಿವರಿಸಿದ್ದಾರೆ.




