ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜರ್ ಒಬ್ಬರಿಂದ 30,000 ರೂ. ಲಂಚ ಪಡೆದ ಎಸಿಪಿ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಲ್ಲೇಶ್ವರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಕೃಷ್ಣ ಮೂರ್ತಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ರಾಜಾಜಿನಗರದಲ್ಲಿ ಹೋಟೆಲ್ ಮ್ಯಾನೇಜರ್ ಆಗಿರುವ ಸಂಜಯ್ ಕುಮಾರ್ ಅವರ ಬಳಿ ಎಸಿಪಿ ಕೃಷ್ಣ ಮೂರ್ತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಹೋಟೆಲ್ ತೆರೆದಿರಲು ಅವಕಾಶ ನೀಡಬೇಕೆಂದರೆ 50,000 ರೂ. ಲಂಚ ಕೊಡಬೇಕೆಂದು ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಎಸಿಪಿ ಲಂಚ ಪೀಡನೆಯಿಂದ ಬಸವಳಿದಿದ್ದ ಮ್ಯಾನೇಜರ್ ಸಂಜಯ್ ಕುಮಾರ್, ಲೋಕಾಯುಕ್ತರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ಲೋಕಾಯುಕ್ತರ ಸೂಚನೆಯಂತೆ30,000 ರೂ. ಹಣವನ್ನು ಎಸಿಪಿಗೆ ಕೊಡಲು ಸಂಜಯ್ ಕುಮಾರ್ ಕೊಂಡೊಯ್ದಿದ್ದರು. ಆ ಹಣವನ್ನು ಎಸಿಪಿ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ಎಸಿಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ತನಿಖೆ ನಡೆಸುತ್ತಿದ್ದಾರೆ.




