‘ನಿನಗೆ ಜನ ಚಪ್ಪಲಿಯಿಂದ ಹೊಡೆಯುತ್ತಾರೆ’ ಎಂದು ಮಾಗಡಿ ತಜಶೀಲ್ದಾರ್ಗೆ ಶಾಸಕ ಎಚ್ಸಿ ಬಾಲಕೃಷ್ಣ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿಯಲ್ಲಿನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಕಾಂಗ್ರೆಸ್ ಬಾಲಕೃಷ್ಣ ಆವಾಜ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ ಶಾಸಕ ಎಲ್ಲರ ಎದುರೇ ತಹಶೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಂದಿಸಿದ್ದಾರೆ.
“ಜನರ ಕೆಲಸಗಳನ್ನು ಸರಿಯಾಗಿ ಮಾಡಿಕೊಡದಿದ್ದರೆ, ಜನ ನಿನಗೂ ಹೊಡಿತಾರೆ, ನನಗೂ ಹೊಡಿತಾರೆ. ಸರಿಯಾಗಿ ಕೆಲಸ ಮಾಡಿಸಲು ಆಗದಿದ್ದಕ್ಕೆ ಮೊದಲು ನನಗೆ ಚಪ್ಪಲಿಯಲ್ಲಿ ಹೊಡಿತಾರೆ, ಆಮೇಲೆ ನಿನಗೆ ಹೊಡೆಯುತ್ತಾರೆ” ಎಂದು ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.
“ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಜನಪ್ರತಿನಿಧಿಗಳಿಗೆ ಮುಜುಗರವಾಗುತ್ತಿದೆ. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಾ? ಕೆಲಸ ಮಾಡಲು ನಾಚಿಕೆ ಆಗಲ್ವಾ ನಿಮಗೆ? ಎಷ್ಟೋ ಅಧಿಕಾರಿಗಳು ಉತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ. ಆದರೆ ನೀವು ಜನರನ್ನು ಯಾಕೆ ಸತಾಯಿಸುತ್ತಿದ್ದೀರಿ” ಎಂದು ಕಿಡಿಕಾರಿದ್ದಾರೆ.




