ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವನ ದೇವಾಲಯಕ್ಕೆ ಮುಸ್ಲಿಂ ಶಾಸಕ ಭೇಟಿ ನೀಡಿದ್ದಕ್ಕಾಗಿ, ದೇವಾಲಯವನ್ನು ಬಿಜೆಪಿಗರು ಶುದ್ದೀಕರಣ ಮಾಡಿ ಕೋಮುದ್ವೇಷ ಮೆರೆದಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಿಲ್ಲೋದ್ನಲ್ಲಿ ನಡೆದಿದೆ.
ಸಿಲ್ಲೋದ್ನ ಶಿವ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಆಯೋಜಿಸಲಾಗಿತ್ತು. ಹೀಗಾಗಿ, ಕ್ಷೇತ್ರದ ಶಾಸಕ ಶಿವಸೇನೆ ನಾಯಕ ಅಬ್ದುಲ್ ಸತ್ತಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು, ಹಬ್ಬದ ಶುಭಾಶಯ ಕೋರಿದ್ದರು. ಆದರೆ, ಅವರು ದೇವಾಲಯದಿಂದ ತೆರಳಿದ ಬಳಿಕ, ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ದೇವಾಸ್ಥಾನವನ್ನು ಶುದ್ಧೀಕರಸಿದ್ದಾರೆ.
ಶಾಸಕ ಸತ್ತಾರ್ ಅವರು ಶಿವ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಭೇಟಿಯ ವಿರುದ್ಧವೂ ಬಿಜೆಪಿ ಮತ್ತು ಹಿಂದುತ್ವವಾದಿಗಳು ದ್ವೇಷಕಾರಿದ್ದಾರೆ. ಹಿಂದುತ್ವ ಕೋಮುವಾದಿಗಳು ದೇವಾಲಯವನ್ನು ಶುದ್ಧೀಕರಿಸಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.




