ನಕಲಿ ಆಧಾರ್ ಕಾರ್ಡ್ ತಯಾರಿ ಮಾಡುತ್ತಿದ್ದಾರೆಂದು ಸುಳ್ಳು ಆರೋಪ ಹೊರಿಸಿ, ಬೆದರಿಕೆ ಹಾಕಿ ಜೆರಾಕ್ಸ್ ಅಂಗಡಿ ಮಾಲೀಕನಿಂದ ಸುಮಾರು 1.6 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಕನಕಪುರ ತಾಲೂಕಿನ ಕಗ್ಗಲೀಪುರ ಠಾಣೆಯ ಪಿಎಸ್ಐ ಹರೀಶ್ ಅಮಾನತುಗೊಂಡ ಅಧಿಕಾರಿ. ಅವರನ್ನು ಅಮಾನತು ಮಾಡಿ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
ಕನಕಪುರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ರಾಜೇಶ್ ಎಂಬರನ್ನು ಸುಳ್ಳು ಆರೋಪದ ಮೇಲೆ ಬೆದರಿಸಿ ಪಿಎಸ್ಐ ಹರೀಶ್ ಹಣ ಸುಲಿಗೆ ಮಾಡಿದ್ದಾರೆ. ರಾಜೇಶ್ಗೆ ಆಗ್ಗಾಗೆ ಕರೆ ಮಾಡುತ್ತಿದ್ದ ಪಿಎಸ್ಐ ಹರೀಶ್, “ನೀವು ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದೀರಿ ಎಂಬ ಗಂಭೀರ ಆರೋಪ ಇದೆ. ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ವಜಾ ಮಾಡಲು ಹಣ ಕೊಡಬೇಕು” ಎಂದು ಬೇಡಿಕೆ ಇಟ್ಟಿದ್ದಾಗಿ ಆರೋಪಿಸಲಾಗಿದೆ.
ಪೊಲೀಸ್ ಪ್ರಕರಣಗಳಿಗೆ ಹೆದರಿದ ರಾಜೇಶ್ ಅವರು ಪಿಎಸ್ಐಗೆ 1.6 ಲಕ್ಷ ರೂ.ಗಳನ್ನು ಮೂರು ಕಂತುಗಳಲ್ಲಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.




