ದಲಿತ ಯುವಕನನ್ನು ಅಪಹರಿಸಿ, ಆತನ ಮೇಲೆ ಹಲ್ಲೆ ನಡೆಸಿರುವ ಸವರ್ಣೀಯ ದುರುಳರು, ಆತನಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ದಲಿತ ಸಮುದಾಯದ ಸಂತ್ರಸ್ತನು ಬೊಲೆರೊ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ, ಭಿಂಡ್ನ ನಿವಾಸಿ ಸೋನು ಬರು ಎಂಬಾತನ ಬಳಿ ಕೆಲಸ ಮಾಡಿದ್ದರು. ಇತ್ತೀಚೆಗೆ ಕೆಲಸ ತೊರೆದಿದ್ದರು. ಗ್ವಾಲಿಯರ್ನಲ್ಲಿರುವ ತನ್ನ ಪತ್ನಿಯ ತವರು ಮನೆಯಲ್ಲಿ ನೆಲೆಸಿದ್ದರು. ಅವರನ್ನು ಮೂವರು ಸವರ್ಣೀಯರು ಗ್ವಾಲಿಯರ್ನಿಂದ ಅಪಹರಿಸಿ, ದೌರ್ಜನ್ಯ ಎಸಗಿದ್ದಾರೆ.
ತಮ್ಮ ಮೇಲಾದ ದೌರ್ಜನ್ಯ/ಹಲ್ಲೆ ಕುರಿತು ಪೊಲೀಸರಿಗಡ ದೂರು ನೀಡಿರುವ ಸಂತ್ರಸ್ತ, “ಮೂರು ದಿನಗಳ ಹಿಂದೆ ಸೋನು ಬರುವಾ ಅವರು ಅಲೋಕ್ ಪಾಠಕ್ ಹಾಗೂ ಛೋಟು ಓಝಾ ಎಂಬವರ ಜೊತೆ ತನ್ನ ಪತ್ನಿಯ ತವರು ಮನೆಗೆ ಬಂದಿದ್ದರು. ತಮ್ಮ ಜೊತೆಯಲ್ಲೇ ಕೆಲಸ ಮಾಡುವಂತೆ ಒತ್ತಾಯಿಸಿದರು. ಆದರೆ, ನಾನು ನಿರಾಕರಿಸಿದೆ. ಬಳಿಕ ಅವರು ನನ್ನನ್ನು ಬೊಲೆರೊದಲ್ಲಿ ಬಲವಂತವಾಗಿ ಕೂಡಿ ಹಾಕಿ ಕರೆದೊಯ್ದರು” ಎಂದು ಆರೋಪಿಸಿದ್ದಾರೆ.
“ಭಿಂಡ್ಗೆ ನನ್ನನ್ನು ಎಳೆದೊಯ್ದು, ಪ್ಲಾಸ್ಟಿಕ್ ಪೈಪ್ನಿಂದ ಹಲ್ಲೆ ಮಾಡಿದ್ದಾರೆ. ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಬಳಿಕ, ಮೂತ್ರವನ್ನು ಕುಡಿಯುವಂತೆ ಬಲವಂತಪಡಿಸಿದ್ದಾರೆ. ಅಲ್ಲದೆ ಅಕುಟುಪುರಾ ಗ್ರಾಮಕ್ಕೆ ನನ್ನನ್ನು ಕರೆದೊಯ್ದು ನನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ, ರಾತ್ರಿಯಿಡೀ ಹಲ್ಲೆ ನಡೆಸಿದ್ದಾರೆ” ಎಂದು ಸಂತ್ರಸ್ತ ಆರೋಪಿಸಿದ್ದಾರೆ




