ಹುಬ್ಬಳ್ಳಿಯಲ್ಲಿ ಸ್ಥಳೀಯ ಆಡಳಿತವು ಒತ್ತುವರಿ ತೆರವು ಹೆಸರಿನಲ್ಲಿ 47 ಮನೆಗಳನ್ನು ಧ್ವಂಸಗೊಳಿಸಿದ್ದು, ಹಲವಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮನೆಗಳನ್ನು ನೆಲಸಮ ಮಾಡಿರುವುದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೇಳಿಕೊಂಡಿದೆ.
ಗುರುವಾರ ಸಂಜೆ, ಹುಬ್ಬಳಿಯ ಉದಯನಗರಕ್ಕೆ ಜೆಸಿಬಿಗಳೊಂದಿಗೆ ಬಂದ ಅಧಕಾರಿಗಳು, 47 ಮನೆಗಳನ್ನು ಕಡೆವಿದ್ದಾರೆ. ಆ ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಆ ಭೂಮಿಯನ್ನು ಖರೀದಿಸಿ ಮನೆ ಕಟ್ಟಿದ್ದವರ ಕನಸು ಭಗ್ನವಾಗಿದೆ. ಮಾತ್ರವಲ್ಲದೆ, ತೀವ್ರ ನಷ್ಟಕ್ಕೂ ಗುರಿಯಾಗಿದ್ದಾರೆ.
ಮನೆ ಕಳೆದುಕೊಂಡ 47 ಕುಟುಂಬಗಳು ಉದಯನಗರದಲ್ಲಿ ನಿವೇಶನ ಖರೀದಿಸಿಯೇ ಮನೆ ಕಟ್ಟಿದ್ದರು. ಆದರೆ, ಆ ನಿವೇಶನಗಳನ್ನು ಮೋಸದ ಜಾಲವು ಅಕ್ರಮವಾಗಿ ಮಾರಾಟ ಮಾಡಿತ್ತು. ಆ ಜಾಲವನ್ನು ನಂಬಿದ್ದ ಕುಟುಂಬಗಳು ಸರಿಯಾದ ದಾಖಲೆಗಳನ್ನು ಪರಿಶೀಲಿಸದೆ, ನಿವೇಶನ ಖರೀದಿಸಿ, ಮನೆ ನಿರ್ಮಿಸಿದ್ದರು ಎಂದು ವರದಿಯಾಗಿದೆ.
ತಮ್ಮ ಭೂಮಿಯಲ್ಲಿ ಮನೆ ಕಟ್ಟಿರುವುದನ್ನು ಪ್ರಶ್ನಿಸಿ ಜಮೀನಿನ ಮೂಲ/ನೈಜ ಮಾಲೀಕ ರಾಮರಾವ್ ಸಬನಿಸ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಭೂಮಿಯನ್ನು ಸಿಕಂದರ್ ಎಂಬಾತ ತನ್ನದೇ ಭೂಮಿಯೆಂದು ಸುಳ್ಳು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾನೆ. ತಮ್ಮ ಭೂಮಿಯನ್ನು ತಮಗೆ ಬಿಡಿಸಿಕೊಡಬೇಕೆಂದು ಮನವಿ ಮಾಡಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿದಾರ ರಾಮರಾವ್ ಸಬನಿಸ್ ಅವರ ಪರವಾಗಿ ತೀರ್ಪು ನೀಡಿತು. ಪೊಲೀಸ್ ಬಂದೋಬಸ್ತ್ನಲ್ಲಿ ಜಾಗವನ್ನು ತೆರವುಗೊಳಿಸಿ, ರಾಮರಾವ್ಗೆ ಹಸ್ತಾಂತರಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿತ್ತು.




