ಹೊಸ ತೆರಿಗೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ‘ಮುಂದಿನ ಪೀಳಿಗೆಯ ಜಿಎಸ್ಟಿ ಪರಿಷ್ಕರಣೆ’ ಎಂದು ಕರೆದರೆ ಕಾಂಗ್ರೆಸ್ ಇದನ್ನು ‘ಜಿಎಸ್ಟಿ 1.5’ ಆಗಿದ್ದು, ನಿಜವಾದ ‘ಜಿಎಸ್ಟಿ 2.0’ಗಾಗಿ ಕಾಯುವಿಕೆ ಮುಂದುವರಿದಿದೆ ಎಂದು ಹೇಳಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಜಿಎಸ್ಟಿ ದರ ಪರಿಷ್ಕರಣೆ ವಿಚಾರವಾಗಿ ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿದ್ದು, “ಒಂದು ದಶಕದಿಂದ ಜಿಎಸ್ಟಿ ಸರಳೀಕರಣಗೊಳಿಸಲು ಕಾಂಗ್ರೆಸ್ ಒತ್ತಾಯಿಸುತ್ತ ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಒಂದು ರಾಷ್ಟ್ರ, ಒಂದು ತೆರಿಗೆ’ ವ್ಯವಸ್ಥೆಯನ್ನು ‘ಒಂದು ರಾಷ್ಟ್ರ, ಒಂಬತ್ತು ತೆರಿಗೆಗಳಾಗಿ ಬದಲಿಸಿತ್ತು” ಎಂದಿದ್ದಾರೆ.
“ದಿನನಿತ್ಯದ ವಸ್ತುಗಳ ಮೇಲೂ ಜಿಎಸ್ಟಿ ಹೇರಲಾಯಿತು. ಅದಕ್ಕಾಗಿಯೇ ನಾವು ಬಿಜೆಪಿಯ ಜಿಎಸ್ಟಿಯನ್ನು ‘ಗಬ್ಬರ್ ಸಿಂಗ್ ತೆರಿಗೆ’ ಎಂದು ಕರೆದಿದ್ದೆವು. ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹವು ಶೇ 240 ಹಾಗೂ ಜಿಎಸ್ಟಿ ಸಂಗ್ರಹವು ಶೇ 177ರಷ್ಟು ಹೆಚ್ಚಾಗಿದೆ. ಎಂಟು ವರ್ಷಗಳ ಬಳಿಕವಾದರೂ ಗಾಢ ನಿದ್ದೆಯಿಂದ ಎದ್ದು ಜಿಎಸ್ಟಿ ಬಗ್ಗೆ ಮಾತನಾಡಿರುವುದು ಒಳ್ಳೆಯ ವಿಚಾರ” ಎಂದಿದ್ದಾರೆ.





