ಸಾಮಾನ್ಯವಾಗಿ ನಾವು ಸತ್ತ ಮೇಲೆ ನಮ್ಮ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ʼವಿಲ್ʼ ಬರೆದಿಟ್ಟಿರುತ್ತೇವೆ. ಅದರಂತೆ ಅವರು ಇಹಲೋಕ ತ್ಯಜಿಸಿದ ಮೇಲೆ ಅಂಗಾಗ ದಾನ ಮಾಡಿರುವುದನ್ನು, ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗಾಗಿ ದೇಹ ದಾನ ನೀಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಇತ್ತೀಚೆಗೆ ಕೇರಳದಲ್ಲಿ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ದೊಡ್ಡ ಸುದ್ದಿಯಾಗಿದೆ. ಫೆಬ್ರವರಿ 5ರಂದು ಮಧ್ಯಾಹ್ನ 2:30ರ ಸುಮಾರಿಗೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಂಸಿ ರಸ್ತೆಯ ಪಲ್ಲಂ-ಬೋರ್ಮಾ ಜಂಕ್ಷನ್ ಬಳಿ ವಾಹನವೊಂದು ಅಪಘಾತಕ್ಕೆ ಈಡಾಗುತ್ತದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನಕ್ಕೆ ಕಾರು ಡಿಕ್ಕಿ ಹೊಡೆಯುತ್ತದೆ. ಅಪಘಾತವಾದ ಕಾರಿನಲ್ಲಿ ತಾಯಿ, ಅಜ್ಜ-ಅಜ್ಜಿ ಜೊತೆ ಹತ್ತು ತಿಂಗಳ ಕಂದಮ್ಮ ಅಲಿನ್ ಶೆರಿನ್ ಅಬ್ರಹಾಂ ಪ್ರಯಾಣಿಸುತ್ತಿದ್ದಳು. ಅಪಘಾತದಲ್ಲಿ ಎಲ್ಲರಿಗೂ ತೀವ್ರವಾದ ಗಾಯವಾದರೆ, ಮಗು ಗಂಭೀರ ಸ್ಥಿತಿಗೆ ತಲುಪಿತ್ತು. ತಕ್ಷಣವೇ ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಗುವಿನ ಮಿದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಫೆ.13ರಂದು ವೈದ್ಯರ ಸಲಹೆಯ ಮೇರೆಗೆ ಮಗುವಿನ ಹೆತ್ತವರು ಅಂಗಾಂಗ ದಾನದ ನಿರ್ಧಾರ ಮಾಡಿದ್ದಾರೆ.
ಹೌದು, ಕೇರಳದಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟ ಮಗು ಅಲಿನ್ ಶೆರಿನ್ನ ದೇಹದ ಅಂಗಾಂಗ ದಾನ ಮಾಡಲಾಗಿದೆ. ಅಲಿನ್ನ ಪೋಷಕರು ಕೈಗೊಂಡ ನಿರ್ಧಾರದಿಂದ ಕಿಡ್ನಿ, ಕಣ್ಣು, ಯಕೃತ್ತು ಮತ್ತು ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಆ ಕೂಡಲೇ ಅಗತ್ಯವಿರುವ ಐದು ಜನರಿಗೆ ಕಸಿ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಆಲಿನ್ ಶೆರಿನ್ ಅಬ್ರಹಾಂ ಎಂಬ ಪುಟ್ಟ ಮಗು ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿದ್ದಾಳೆ.
ಅಂಗಾಂಗ ದಾನವಾದ ನಂತರ ಮಗುವಿನ ಅಂತ್ಯಕ್ರಿಯೆಯನ್ನು ಫೆ.15ರಂದು ನೆರವೇರಿಸಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಆಲಿನ್ ಶೆರಿನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಈ ವೇಳೆ ರಾಜ್ಯದ ವಿವಿಧೆಡೆಯಿಂದ ಅನೇಕ ಗಣ್ಯರು, ಮಂತ್ರಿಗಳು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸುರೇಶ್ ಗೋಪಿ, ರಾಜ್ಯ ಸರ್ಕಾರ ಪರವಾಗಿ ಸಚಿವೆ ವೀಣಾ ಜಾರ್ಜ್, ಇವರೊಂದಿಗೆ ಸಚಿವರಾದ ವಿ.ಎನ್.ವಾಸವನ್, ಸಾಜಿ ಚೆರಿಯನ್, ರೋಶಿ ಆಗಸ್ಟೀನ್, ಕಾಂಗ್ರೆಸ್ ನಾಯಕರಾದ ಪಿ.ಎಸ್.ವಿಷ್ಣುದಾದ ಸೇರಿದಂತೆ ಅನೇಕ ಶಾಸಕರು ಭಾಗಿಯಾಗಿದ್ದರು.
ಜೊತೆಗೆ, ಆಲಿನ್ ಶೆರಿನ್ ಅಂಗಾಂಗ ದಾನ ಪಡೆದಿದ್ದ ಮಕ್ಕಳ ಪೈಕಿ ಒಂದು ಮಗುವಿನ ಕುಟುಂಬಸ್ಥರು ಸಹ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಪೋಷಕರ ಒಪ್ಪಿಗೆಯ ಮೇರೆಗೆ, ಅಂಗಾಂಗ ದಾನ ಪ್ರಕ್ರಿಯೆಯನ್ನು ಕೇರಳ ರಾಜ್ಯದ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಕೆ-ಸೊಟ್ಟೊ) ಮೂಲಕ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗು ದಾನ ಮಾಡಿದ ಹೃದಯ ಕವಾಟಗಳನ್ನು ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ, ಯಕೃತ್ತನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ ಮತ್ತು ಮೂತ್ರಪಿಂಡಗಳನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ, ಕಣ್ಣುಗಳನ್ನು ಐ ಬ್ಯಾಂಕ್ಗೆ ದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸರಿಯಾಗಿ ಅಂಬೆಗಾಲು ಇಡದ ಹತ್ತು ತಿಂಗಳ ಕಂದಮ್ಮನ ಸಾವಿಗೆ ಎಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಅವರು ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿ “ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 10 ತಿಂಗಳ ಮಗು ಆಲಿನ್ ಶೆರಿನ್ ಅಬ್ರಹಾಂ ನಿಧನ ನಮ್ಮೆಲ್ಲರನ್ನೂ ತೀವ್ರ ದುಃಖಿತರನ್ನಾಗಿ ಮಾಡಿದೆ. ಊಹಿಸಲಾಗದ ನೋವಿನ ನಡುವೆಯೂ, ಆಕೆಯ ಪೋಷಕರಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗುವ ಮೂಲಕ, ಪುಟ್ಟ ಕಂದ ಆಲಿನ್ ಇತರ ಐದು ಜನರಿಗೆ ಹೊಸ ಜೀವ ನೀಡಿದ್ದಾರೆ, ಇದು ಕೇರಳದ ನಿಜವಾದ ಚೈತನ್ಯವನ್ನು ಪ್ರತಿಬಿಂಬಿಸುವ ಕರುಣೆಯ ಒಂದು ಸ್ಮಾರಕ ಕಾರ್ಯವಾಗಿದೆ” ಎಂದು ಹೇಳಿದ್ದಾರೆ.
“ಮಗುವಿನ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಕಸಿ ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾಗಿಸಿದ ಸಮರ್ಪಿತ ವೈದ್ಯರು, ಪೊಲೀಸರಿಗೆ ನಾನು ವಂದಿಸುತ್ತೇನೆ. ಅಧಿಕೃತ ಗೌರವಗಳೊಂದಿಗೆ ಆಲಿನ್ ಶೆರಿನ್ ಅಬ್ರಹಾಂ ಅವರಿಗೆ ನಾವು ವಿದಾಯ ಹೇಳುತ್ತೇವೆ” ಎಂದು ಭಾವನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ.
ಕೆ-ಸೊಟ್ಟೊ : ಮೃತ ಮತ್ತು ಜೀವಂತ ದಾನಿ ಕಾರ್ಯಕ್ರಮಗಳಿಗೆ ಇರುವ ಏಕೈಕ ಪ್ರಾಧಿಕಾರವೇ ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಕೆ-ಸೊಟ್ಟೊ). ಇದು ಸರ್ಕಾರಿ ಸಂಸ್ಥೆಯಾಗಿದ್ದು, ಎಲ್ಲಾ ಸಾರ್ವಜನಿಕ ಕಸಿ ಕೇಂದ್ರಗಳನ್ನು ಇದರಡಿ ತಂದು ಸಮನ್ವಯ ಮತ್ತು ಪಾರದರ್ಶಕತೆ ಹೆಚ್ಚಿಸುವ ಗುರಿ ಹೊಂದಿದೆ. ಈಗಾಗಲೇ ಲಕ್ಷಾಂತರ ಅಂಗಾಂಗ ದಾನ ಕ್ರಮಗಳನ್ನು ಈ ಸಂಸ್ಥೆ ಮೂಲಕ ನಡೆಸಲಾಗಿದೆ.





