ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ ತೀವ್ರಗೊಂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಗುಜರಾತ್ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸೋಮವಾರ ಲೋಕಸಭೆಯಲ್ಲಿ ಪ್ರಧಾನಿಯವರು ಮಾಡಿದ ಭಾಷಣವನ್ನು ಪ್ರಶ್ನಿಸಿದರು. ವಿಶೇಷವಾಗಿ ತಮ್ಮ ಭಾಷಣದಲ್ಲಿ ಅಮೆರಿಕವನ್ನು ನೇರವಾಗಿ ಉಲ್ಲೇಖಿಸದಿರುವುದನ್ನು ‘ಎದ್ದುಕಾಣುವ ಲೋಪ’ ಎಂದು ಹೇಳಿದರು. ಮೋದಿಯವರ ಮೌನ ಕೇವಲ ಆಕಸ್ಮಿಕವಲ್ಲ, ಇದು ಆಳವಾದ ಸಮಸ್ಯೆಯ ಸೂಚಕವಾಗಿದೆ ಎಂದು ರಾಹುಲ್ ಹೇಳಿದರು.
”ಪ್ರಧಾನಿ 25 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ ಎಂದು ನಾನು ಕೇಳಿದ್ದೇನೆ. ಆದರೆ ಅವರು ಸಂಸತ್ತಿನಲ್ಲಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ, ಏಕೆಂದರೆ ಅವರು ರಾಜಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ 25 ನಿಮಿಷಗಳ ಕಾಲ ಮಾತನಾಡಿದರು, ಆದರೆ ಅಮೆರಿಕದ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ನರೇಂದ್ರ ಮೋದಿ ಶೇಕಡಾ 100 ರಷ್ಟು ಟ್ರಂಪ್ ನಿಯಂತ್ರಣದಲ್ಲಿದ್ದಾರೆ” ಎಂದು ಅವರು ಆರೋಪಿಸಿದರು.
ಸರ್ಕಾರದ ಆರ್ಥಿಕ ನಿರ್ಧಾರಗಳನ್ನೂ ಟೀಕಿಸಿದ ಕಾಂಗ್ರೆಸ್ ನಾಯಕ, ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದಗಳು ಭಾರತೀಯ ರೈತರ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಉಭಯ ದೇಶಗಳ ಕೃಷಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಎತ್ತಿತೋರಿಸಿದ ಅವರು, ಅಮೆರಿಕದ ಸರಕುಗಳಿಗೆ ಹೆಚ್ಚಿನ ಅವಕಾಶ ನೀಡುವುದರಿಂದ ದೇಶೀಯ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.
”ಭಾರತದ ಜನರು ಸಣ್ಣ ಜಮೀನುಗಳನ್ನು ಹೊಂದಿದ್ದು, ಅವರು ಕೈಯಾರೆ ಕೆಲಸ ಮಾಡುತ್ತಾರೆ. ಆದರೆ ಅಮೆರಿಕದಲ್ಲಿ ಯಂತ್ರಗಳ ಮೂಲಕ ಕಾರ್ಯನಿರ್ವಹಿಸುವ ಬೃಹತ್ ಜಮೀನುಗಳಿವೆ. ಅಮೆರಿಕದ ಸರಕುಗಳು ಭಾರತಕ್ಕೆ ಬರಲು ಪ್ರಾರಂಭಿಸಿದರೆ, ನಮ್ಮ ರೈತರು ನಾಶವಾಗುತ್ತಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
”ಆದಿವಾಸಿ ಎಂದರೆ ಭಾರತದ ಮೂಲ ನಿವಾಸಿಗಳು – ಈ ಭೂಮಿ, ನೀರು ಮತ್ತು ಕಾಡುಗಳ ನಿಜವಾದ ಮಾಲೀಕರು. ಆದರೆ ಆರ್ಎಸ್ಎಸ್-ಬಿಜೆಪಿ ‘ವನವಾಸಿ’ ಎಂಬ ಹೊಸ ಪದವನ್ನು ಪರಿಚಯಿಸಿದೆ. ಇದರರ್ಥ ನೀವು ಕೇವಲ ಕಾಡುಗಳಲ್ಲಿ ವಾಸಿಸುವವರೇ ಹೊರತು, ಈ ಸಂಪನ್ಮೂಲಗಳ ನಿಜವಾದ ಮಾಲೀಕರಲ್ಲ ಎಂಬುದಾಗಿದೆ” ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ಸ್ಮರಿಸಿದ ರಾಹುಲ್, ಆಡಳಿತರೂಢ ಬಿಜೆಪಿ ಕೇವಲ ಸಾಂಕೇತಿಕ ಗೌರವವನ್ನು ನೀಡುತ್ತಾ, ಅವರು ಪ್ರತಿಪಾದಿಸಿದ ತತ್ವಗಳನ್ನೇ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. “ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಬಿರ್ಸಾ ಮುಂಡಾ ಪ್ರತಿಮೆಯ ಮುಂದೆ ಕೈ ಮುಗಿಯುತ್ತಾರೆ. ಆದರೆ ಬಿರ್ಸಾ ಮುಂಡಾ ಹೋರಾಡಿದ ಮತ್ತು ಹುತಾತ್ಮರಾದ ಆದರ್ಶಗಳ ಮೇಲೆಯೇ ಅವರು ದಾಳಿ ಮಾಡುತ್ತಾರೆ. ಆದಿವಾಸಿಗಳಿಂದ ಭೂಮಿ, ನೀರು ಮತ್ತು ಕಾಡುಗಳನ್ನು ಕಸಿದುಕೊಳ್ಳುವುದು ಕೇವಲ ಬಿರ್ಸಾ ಮುಂಡಾ ಮೇಲಿನ ದಾಳಿಯಲ್ಲ, ಇದು ಸಂವಿಧಾನದ ಮೇಲಿನ ದಾಳಿಯೂ ಹೌದು” ಎಂದು ಅವರು ಕಿಡಿಕಾರಿದರು.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ, ಯುದ್ಧದಿಂದ ಉದ್ಭವಿಸಿರುವ ಆರ್ಥಿಕ, ಭದ್ರತಾ ಮತ್ತು ಮಾನವೀಯ ಸವಾಲುಗಳನ್ನು ಭಾರತವು ಸಮರ್ಥವಾಗಿ ನಿಭಾಯಿಸುತ್ತಿದೆ. ಇದರ ಜೊತೆಗೆ ತನ್ನ ನಾಗರಿಕರು ಮತ್ತು ಪ್ರಮುಖ ಪೂರೈಕೆಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಭರವಸೆ ನೀಡಿದರು.
ಹಾರ್ಮುಜ್ ಜಲಸಂಧಿಯಲ್ಲಿನ ಅಡೆತಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ‘ಸ್ವೀಕಾರಾರ್ಹವಲ್ಲ’ ಮತ್ತು ಕಚ್ಚಾ ತೈಲ, ಅನಿಲ ಹಾಗೂ ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕಡಲ ಮಾರ್ಗಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಸಂಸತ್ತಿಗೆ ತಿಳಿಸಿದರು.





