ಒಡಿಶಾದ ಗಹಿರ್ಮಠ ಸಮುದ್ರ ಸಂರಕ್ಷಿತ ಪ್ರದೇಶದ ಹುಕಿತೋಲಾದಿಂದ ಏಕಕುಲ ಬೀಚ್ವರೆಗಿನ ಸುಮಾರು 15 ಕಿ.ಮೀ. ಕರಾವಳಿಯುದ್ದಕ್ಕೂ ಸುಮಾರು 1,500 ಆಲಿವ್ ರಿಡ್ಲೆ ಆಮೆಗಳ ಕಳೇಬರಗಳು ಕಂಡುಬಂದಿವೆ. ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿಕೊಂಡಿದ್ದರಿಂದ ಈ ಆಮೆಗಳು ಮೃತಪಟ್ಟಿರಬಹುದು ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.
ಗಹಿರ್ಮಠ ಪ್ರದೇಶ ಸಮುದ್ರ ಆಮೆಗಳು ಮತ್ತು ಮ್ಯಾಂಗ್ರೋವ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹೇಮಂತ್ ರಾವತ್ ಹೇಳುವಂತೆ; “ಅನೇಕ ಕಳೇಬರಗಳು ಸಮುದ್ರದಿಂದ ದಡಕ್ಕೆ ತೇಲಿಬಂದಿವೆ. ಕಳೇಬರಗಳ ಮೇಲೆ ಗಾಯಗಳ ಗುರುತುಗಳಿವೆ. ಇದು ಅವು ಟ್ರಾಲ್ ಬಲೆಗಳು ಅಥವಾ ಗಿಲ್ ನೆಟ್ಗಳಲ್ಲಿ ಸಿಲುಕಿಕೊಂಡು ಸಾವನ್ನಪ್ಪಿವೆ ಎಂಬುದನ್ನು ಸೂಚಿಸುತ್ತದೆ.”
“ಒಡಿಶಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1982ರ ಪ್ರಕಾರ, ಟ್ರಾಲರ್ಗಳು ಕರಾವಳಿಯಿಂದ 5 ಕಿ.ಮೀ.ಗಿಂತ ದೂರದಲ್ಲಿ ಮೀನುಗಾರಿಕೆ ಮಾಡಬೇಕು. ಸಮುದ್ರ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕರಾವಳಿಯಿಂದ 20 ಕಿ.ಮೀ.ಗಿಂತ ಆಚೆ ಕಾರ್ಯಾಚರಣೆ ನಡೆಸಬೇಕು. ಆದರೆ, ನೂರಾರು ಟ್ರಾಲರ್ಗಳು ಈ ನಿಯಮಗಳನ್ನು ಉಲ್ಲಂಘಿಸಿ ಕರಾವಳಿಯ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿವೆ. ಇದರಿಂದಾಗಿ ಆಮೆಗಳು ಬಲೆಯಲ್ಲಿ ಸಿಲುಕಿಕೊಳ್ಳುತ್ತಿವೆ” ಎಂದು ರಾವತ್ ಆರೋಪಿಸಿದ್ದಾರೆ.
ಅಧಿಕಾರಿಗಳು ಆಮೆಗಳ ಸಾವಿನ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ. “ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಮೃತಪಟ್ಟ ಆಮೆಗಳ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಾರೆ. ಪ್ರತಿ ವರ್ಷ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಮೆಗಳು ಸಾಯುತ್ತಿರುವುದು ಈ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದದ ಸಂತತಿಯ ಮೇಲೆ ಭೀಕರ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಆಲಿವ್ ರಿಡ್ಲೆ’ ಆಮೆಗಳ ಸಂತಾನೋತ್ಪತ್ತಿ ಸಮಯ; ಒಡಿಶಾ ಸಮುದ್ರ ತೀರದಲ್ಲಿ ‘ಆಪರೇಷನ್ ಒಲಿವಿಯಾ’ ಜಾರಿ!
“ಟ್ರಾಲರ್ಗಳಲ್ಲಿ ‘ಟರ್ಟಲ್ ಎಕ್ಸ್ಕ್ಲೂಡರ್ ಡಿವೈಸಸ್’ (TEDs) ಅಳವಡಿಸಿದರೆ ಆಲಿವ್ ರಿಡ್ಲೆ ಆಮೆಗಳ ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು. ಇದು ಮೀನುಗಾರಿಕಾ ಬಲೆಯ ಒಳಗೆ ಅಳವಡಿಸುವ ಸಣ್ಣ ಹೆಚ್ಚುವರಿ ಬಲೆ ಅಥವಾ ಲೋಹದ ಗ್ರಿಡ್ ಆಗಿದ್ದು, ಬಲೆಯಲ್ಲಿ ಸಿಕ್ಕಿಬಿದ್ದ ಆಮೆಗಳು ಹೊರಹೋಗಲು ಅನುವು ಮಾಡಿಕೊಡುತ್ತದೆ. ಮೀನುಗಳು ಬಲೆಯಲ್ಲೇ ಉಳಿಯುತ್ತವೆ. ಆದರೆ, ಟ್ರಾಲರ್ ಬಲೆಗಳಲ್ಲಿ TEDಗಳ ಬಳಕೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ಪ್ರಗತಿಯಾಗಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಹಿರ್ಮಠ ಅರಣ್ಯ ವಲಯ ಅಧಿಕಾರಿ ಕಪಿಲೇಂದ್ರ ಪ್ರಧಾನ್ ಮಾತನಾಡಿ, “ನವೆಂಬರ್ 1ರಿಂದ ಸಮುದ್ರ ಸಂರಕ್ಷಿತ ಪ್ರದೇಶದೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 345 ಮೀನುಗಾರರನ್ನು ನಾವು ಬಂಧಿಸಿದ್ದೇವೆ. ಪಶ್ಚಿಮ ಬಂಗಾಳದ ಎರಡು ಮತ್ತು ಆಂಧ್ರಪ್ರದೇಶದ ಎರಡು ದೋಣಿಗಳು ಸೇರಿದಂತೆ ಒಟ್ಟು 38 ನೌಕೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.




