ಮಧ್ಯಪ್ರದೇಶದ ಇಂದೋರ್ನಲ್ಲಿ ವಿಷಪೂರಿತ ನೀರು ಸೇವಿಸಿ 10 ಮಂದಿ ಮೃತಪಟ್ಟಿದ್ದು 150ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಈ ನಡುವೆಯೇ ಅದೇ ರಾಜ್ಯದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ವಿಷಪೂರಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿದೆ. ದೇಶದಲ್ಲಿ ಸದ್ಯ ಶೇಕಡ 60ರಷ್ಟು ಪಕ್ಷಿ ಪ್ರಬೇಧಗಳು ಕುಸಿತ ಕಾಣುತ್ತಿರುವ ನಡುವೆ ಈ ಸುದ್ದಿಯಾಗಿದೆ.
ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಜಲಚರ ಸೇತುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 200 ಗಿಳಿಗಳ ಮೃತದೇಹಗಳು ಪತ್ತೆಯಾಗಿದೆ. ಆರಂಭದಲ್ಲಿ ಪಕ್ಷಿ ಜ್ವರ ಈ ಸಾವಿಗೆ ಕಾರಣ ಎನ್ನಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಿಂದ ವಿಷಪೂರಿತ ಆಹಾರ ಸೇವನೆ ಮಾಡಿರುವುದರಿಂದ ಗಿಳಿಗಳು ಸಾವನ್ನಪ್ಪಿರುವುದು ಖಚಿತವಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಸಮುದ್ರ ಮೀನುಗಾರಿಕೆ ಪ್ರಾರಂಭ: 2 ತಿಂಗಳ ಬಳಿಕ ಕಡಲಿಗಿಳಿದ ಬೋಟುಗಳು
ಇನ್ನು ಗಿಳಿಗಳನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಸಿದಾಗ ಕೆಲವು ಗಿಳಿಗಳು ಜೀವಂತವಾಗಿದ್ದವು, ಆದರೆ ಆಹಾರದ ವಿಷತ್ವವು ಅತಿ ತೀವ್ರವಾಗಿದ್ದ ಕಾರಣ ಕೆಲವೇ ಸಮಯದಲ್ಲಿ ಸಾವನ್ನಪ್ಪಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ಹೇಳಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಜಲಚರ ಸೇತುವೆಯ ಬಳಿ ಆಹಾರವನ್ನು ನೀಡುವುದನ್ನು ನಿಷೇಧಿಸಿದ್ದು, ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಜತೆಗೆ ಹೆಚ್ಚಿನ ಪರೀಕ್ಷೆಗಾಗಿ ಪಕ್ಷಿಗಳ ಮಾದರಿಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ.
ಆರಂಭದಲ್ಲಿ ಸ್ಥಳೀಯ ನಿವಾಸಿಗಳು ಸ್ಥಳವನ್ನು ಪರಿಶೀಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಪಶುವೈದ್ಯಕೀಯ ಮತ್ತು ಅರಣ್ಯ ಇಲಾಖೆಗಳು, ವನ್ಯಜೀವಿ ವಿಭಾಗದ ತಂಡಗಳು ಸ್ಥಳಕ್ಕೆ ಆಗಮಿಸಿ ಪ್ರದೇಶವನ್ನು ಪರಿಶೀಲಿಸಿದೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಡಾ. ಮನಿಷಾ ಚೌಹಾಣ್, ಗಿಳಿಗಳು ವಿಷಪೂರಿತ ಆಹಾರ ಸೇವಿಸಿದೆ. ಪಕ್ಷಿ ಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ತಿಳಿಸಿದೆ.
“ಜನರು ಸಾಮಾನ್ಯವಾಗಿ ತಿಳಿಯದೆ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಾರೆ. ಆದರೆ ಎಲ್ಲ ಆಹಾರಗಳು ಪಕ್ಷಿಗಳ ಜೀರ್ಣಾಂಗ ವ್ಯವಸ್ಥೆಗೆ ಸರಿಹೊಂದದು. ಸತ್ತ ಪಕ್ಷಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಬೆಣಚುಕಲ್ಲುಗಳು ಕಂಡುಬಂದಿದೆ” ಎಂದು ಪಶುವೈದ್ಯಕೀಯ ವಿಸ್ತರಣಾ ಅಧಿಕಾರಿ ಡಾ. ಸುರೇಶ್ ಬಾಘೇಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಲುಷಿತ ನೀರು ಕುಡಿದು ವಿದ್ಯಾರ್ಥಿನಿಯರು ಅಸ್ವಸ್ಥ
ದೇಶದಲ್ಲಿ ಒಟ್ಟಾಗಿ ಎಲ್ಲ ಪ್ರಭೇದಗಳ ಗಿಳಿಯ ಸಂಖ್ಯೆಯಲ್ಲಿ ಕುಸಿತ ಕಾಣದಿದ್ದರೂ, ಅಲೆಕ್ಸಾಂಡ್ರೈನ್ ಪಾರಕೀಟ್ (Alexandrine Parakeet) ಪ್ರಭೇದ ಕಡಿಮೆಯಾಗುತ್ತಿದೆ. ಅಕ್ರಮ ಮಾರಾಟ, ಆವಾಸಸ್ಥಾನ ನಾಶ ಮತ್ತು ಬೇಟೆಯಿಂದಾಗಿ ಈ ಪ್ರಭೇದದ ಕಡಿಮೆಯಾಗುತ್ತಿದೆ. ಆದರೆ ರೋಸ್-ರಿಂಗ್ಡ್ ಪಾರಕೀಟ್ (Rose-ringed Parakeet) ಮತ್ತು ಇತರೆ ಪ್ರಭೇದಗಳ ಸಂಖ್ಯೆ ಸ್ಥಿರವಾಗಿದೆ.
ಆದರೆ State of India’s Birds 2023 ವರದಿ ಪ್ರಕಾರ ದೇಶದಲ್ಲಿ ಒಟ್ಟಾರೆಯಾಗಿ 30ಕ್ಕೂ ಅಧಿಕ ವರ್ಷಗಳ ಅವಧಿಯಲ್ಲಿ ಸುಮಾರು 338-348 ಪಕ್ಷಿ ಪ್ರಭೇದಗಳಲ್ಲಿ ಸುಮಾರು ಶೇ.60ರಷ್ಟು ಅಂದರೆ 204 ಪ್ರಭೇದಗಳಲ್ಲಿ ಕುಸಿತ ಕಂಡುಬಂದಿದೆ.





