ತಮಿಳುನಾಡಿನ ಶಿವಗಂಗಾದ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಜಾತಿ ಘರ್ಷಣೆಯಲ್ಲಿ ಮೂವರು ದಲಿತರನ್ನು ಕೊಂದಿದ್ದ 26 ಮಂದಿ ಜಾತಿವಾದಿ ದುರುಳರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಓರ್ವನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಈ ಹಿಂದೆ, 2022ರ ಆಗಸ್ಟ್ 5ರಂದು ಎಸ್ಸಿ/ಎಸ್ಟಿ (ಪಿಒಎ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ (ಶಿವಗಂಗಾ) ಕೂಡ 27 ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅಪರಾಧಿಗಳ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜಿಕೆ ಇಳಂತಿರೈಯನ್ ಮತ್ತು ಆರ್ ಪೂರ್ಣಿಮಾ ಅವರಿದ್ದ ಪೀಠವು ವಿಶೇಷ ನ್ಯಾಯಾಲಯದ ತೀರ್ಪುನ್ನು ಎತ್ತಿಹಿಡಿದೆ. ಆದಾಗ್ಯೂ, 27 ಮಂದಿಯಲ್ಲಿ ಪಿ ಇಳಯರಾಜ ಎಂಬಾತನನ್ನು ಖುಲಾಸೆಗೊಳಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2018ರ ಮೇ 25ರಂದು ಗ್ರಾಮದ ಕರುಪ್ಪಣಸ್ವಾಮಿ ದೇವಸ್ಥಾನದಲ್ಲಿ ದಲಿತ ಸಮುದಾಯ ಮತ್ತು ಪ್ರಬಲ ಜಾತಿಯವರ ನಡುವೆ ವಿವಾದ ಮುನ್ನೆಲೆ ಬಂದಿತ್ತು. ದೇವಾಲಯವು ದಲಿತ ಸಮುದಾಯಕ್ಕೆ ಸೇರಿದ್ದರಿಂದ ದೇವಾಲಯದ ಗೌರವವನ್ನು ದಲಿತ ಸಮುದಾಯಕ್ಕೆ ನೀಡಲಾಗಿತ್ತು. ಇದರಿಂದ ಕುಪಿತಗೊಂಡ ಪ್ರಬಲ ಜಾತಿಯ ಎಂ. ಚಂದ್ರಕುಮಾರ್ ಎಂಬಾತ ದಲಿತ ಯುವಕ ಷಣ್ಮುಗನಾಥನ್ ಮತ್ತು ಸಂಗಡಿಗರಿಗೆ ಬೆದರಿಕೆ ಹಾಕಿದ್ದರು. ಬೆದರಿಕೆವೊಡ್ಡಿದ ಚಂದ್ರಕುಮಾರ್ ವಿರುದ್ಧ ಷಣ್ಮುಗನಾಥನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಳಿಸಿದ್ದರು. ಚಂದ್ರಕುಮಾರ್ನನ್ನು ಬಂಧಿಸಿದ ಪೊಲೀಸರು ಅದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಬಂಧನಕ್ಕೊಳಗಾಗಿ ಹೊರಬಂದ ಚಂದ್ರಕುಮಾರ್, ಸೇಟು ತೀರಿಸಿಕೊಳ್ಳಲು 2018ರ ಮೇ 28ರ ರಾತ್ರಿ, ತನ್ನ ಸಮುದಾಯದ ಪುಂಡರ ಗುಂಪು ಕಟ್ಟಿಕೊಂಡು ದಲಿತರು ವಾಸಿಸುವ ಪ್ರದೇಶಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಷಣ್ಮುಗನಾಥನ್, ಆರುಮುಗಂ ಮತ್ತು ಚಂದ್ರಶೇಖರ್ ಅವರನ್ನು ಕೊಂದ ಜಾತಿವಾದಿ ದುರುಳರ ಗುಂಪು, ಸುಗುಮಾರನ್, ಮಲೈಸಾಮಿ, ಧನಶೇಖರನ್, ಮಹೇಶ್ವರನ್ ಮತ್ತು ದೈವೇಂದ್ರನ್ ಅವರನ್ನು ಗಂಭೀರವಾಗಿ ಗಾಯಗೊಳಿಸಿತ್ತು.
ಗಾಯಾಳುಗಳಲ್ಲಿ ಒಬ್ಬರಾದ ಮಹೇಶ್ವರನ್ ಅವರು ಪಳಯನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ 29 ವಯಸ್ಕರು ಮತ್ತು ನಾಲ್ವರು ಬಾಲಾಪರಾಧಿಗಳು ಸೇರಿ 33 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದ 29 ವಯಸ್ಕ ಆರೋಪಿಗಳಲ್ಲಿ ಓರ್ವನಾದ ಪ್ರಶಾಂತ್ ಎಂಬಾತ ವಿಚಾರಣೆಯ ಹಂತದಲ್ಲಿಯೇ ಸಾವನ್ನಪ್ಪಿದ್ದರು. ಮತ್ತೊಬ್ಬ ಆರೋಪಿ ಸುಲ್ಲನ್ ಕರುಪ್ಪಯ್ಯ ತಲೆಮರೆಸಿಕೊಂಡಿದ್ದ ಕಾರಣ, ಆತನನ್ನು ಪ್ರಕರಣದಿಂದ ಪ್ರತ್ಯೇಕಿಸಿ, ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಉಳಿದ ಎಲ್ಲ 2 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.




