2021ರಲ್ಲಿ ಜಾರ್ಖಂಡ್ನ ಲತೇಹರ್ನಲ್ಲಿ ನಡೆದ ಬುಡಕಟ್ಟು ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಪೊಲೀಸ್ ತನಿಖೆಯು ಸರಿಯಾಗಿ ನಡೆದಿಲ್ಲವೆಂದು ಜಾರ್ಖಂಡ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವನ್ನು ಮೂರು ತಿಂಗಳ ಒಳಗೆ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪ್ರಭಾವನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಪರಾಧದಲ್ಲಿ ಅಪರಾಧಿಗಳನ್ನು ರಕ್ಷಿಸಲು ಯತ್ನಿಸಬಾರದು. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
‘ನ್ಯಾಯಯುತ ವಿಚಾರಣೆ ಮಾತ್ರವಲ್ಲ, ನ್ಯಾಯಯುತ ತನಿಖೆ’ ಕೂಡ ಸಾಂವಿಧಾನಿಕ ಹಕ್ಕಿನ ಭಾಗವಾಗಿದೆ. ಕಾನೂನಿನ ಅಡಿಯಲ್ಲಿ ಯಾರೇ ಆಗಿದ್ದರೂ ತಪ್ಪಿತಸ್ತರಿಗೆ ಶಿಕ್ಷೆ, ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಎಂದು ಕೋರ್ಟ್ ಒತ್ತಿ ಹೇಳಿದೆ.
ಜಾರ್ಖಂಡ್ ಹೈಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಅವರು, ಕನಿಷ್ಠ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರೂ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಗೆ ‘ಕ್ಲೀನ್ ಚಿಟ್’ ನೀಡಿದ್ದ ರಾಜ್ಯ ಪೊಲೀಸ್ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಹೊಸ ತನಿಖೆಗೆ ಆದೇಶಿಸಿದ್ದಾರೆ.
2021ರ ಜೂನ್ 12ರಂದು, ಲತೇಹರ್ನ ಗರು ಬ್ಲಾಕ್ನ ಪಿರಿ ಗ್ರಾಮದಲ್ಲಿ ಬ್ರಹ್ಮದೇವ್ ಸಿಂಗ್ (24) ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಕೊಂಡಿದ್ದರು. ಪ್ರಕರಣವನ್ನು ಆರಂಭದಲ್ಲಿ ‘ಅಡ್ಡ ಗುಂಡಿನ ದಾಳಿ’ಯ ಪರಿಣಾಮ ಎಂದು ಪೊಲೀಸರು ಹೇಳಿದ್ದರು. ಕೊಲೆ ಯತ್ನ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಮೃತರು ಸೇರಿದಂತೆ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಆದಾಗ್ಯೂ, ಮೃತನ ಕುಟುಂಬವು ಪೊಲೀಸರ ವಿರುದ್ಧ ಕೊಲೆ ಆರೋಪ ಮಾಡಿದ್ದರಿಂದ, ಮತ್ತೊಂದು ಎಫ್ಐಆರ್ ದಾಖಲಿಸಲಾಗಿತ್ತು. ಎರಡೂ ಎಫ್ಐಆರ್ಗಳನ್ನು ಜಾರ್ಖಂಡ್ನ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸಿತು. ಪೊಲೀಸರ ಯಡವಟ್ಟಿನಿಂದ ಬ್ರಹ್ಮದೇವ್ ಸಾವನ್ನಪ್ಪಿದ್ದಾರೆಂದೂ, ಪ್ರಕರಣವನ್ನು ಮುಚ್ಚಬೇಕೆಂದೂ ವರದಿ ಸಲ್ಲಿಸಿತ್ತು.
ಈ ಸುದ್ದಿ ಓದಿದ್ದೀರಾ?: ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ
ಸಿಐಡಿ ವರದಿ ವಿರುದ್ಧ ಬ್ರಹ್ಮದೇವ್ ಸಿಂಗ್ ಅವರ ಪತ್ನಿ ಜಿರಾಮಣಿ ದೇವಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. “ಮೃತ ಬ್ರಹ್ಮದೇವ್ ಸಿಂಗ್ ಅವರು ಪೊಲೀಸರ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಪ್ರಕರಣವನ್ನು ದೋಷವೆಂದು ತಿಳಿಸಲಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಯಾವುದೇ ಶಿಫಾರಸುಗಳಿಲ್ಲ. ವರದಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ತಿಳಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಉದ್ದೇಶದಿಂದ ಪ್ರಕರಣವು ಹೊಸ ತನಿಖೆಗೆ ಸೂಕ್ತವಾಗಿದೆ” ಎಂದು ಹೇಳಿದೆ.




