ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಬರೋಬ್ಬರಿ 1.18 ಕೋಟಿ ರೂ. ಬಹುಮಾನ ಹೊಂದಿದ್ದ 23 ನಕ್ಸಲ್ ನಾಯಕರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದರಲ್ಲಿ ಮೂವರು ದಂಪತಿಗಳೂ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯವಾಹಿನಿಗೆ ಬಂದವರಲ್ಲಿ 11 ಹಿರಿಯ ಕಾರ್ಯಕರ್ತರು ಸೇರಿದ್ದಾರೆ. ಈ ಪೈಕಿ ಹೆಚ್ಚಿನವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಬೆಟಾಲಿಯನ್ ನಂ.1 ನಲ್ಲಿ ಸಕ್ರಿಯರಾಗಿದ್ದವರು. ಇದು ಮಾವೋವಾದಿಗಳ ಪ್ರಬಲ ಮಿಲಿಟರಿ ಪಡೆದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ಎನ್ಜಿಒಗಳಲ್ಲಿ ನಗರ ನಕ್ಸಲರು’ ಹೇಳಿಕೆ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆಗೆ ನೋಟಿಸ್
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್, “ಸಂಘಟನೆಯೊಳಗೆ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ನಿರಾಶೆಯಿಂದಾಗಿ ಹಿರಿಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳ ಮುಂದೆ ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ ಒಂಬತ್ತು ಮಹಿಳೆಯರು ಇದ್ದಾರೆ” ಎಂದು ಹೇಳಿದ್ದಾರೆ.
ಲೋಕೇಶ್ ಅಲಿಯಾಸ್ ಪೋಡಿಯಂ ಭೀಮ (35), ರಮೇಶ್ ಅಲಿಯಾಸ್ ಕಲ್ಮು ಕೇಸ (23), ಕವಾಸಿ ಮಾಸ (35), ಮಡ್ಕಮ್ ಹಂಗಾ (23), ನುಪ್ಪೊ ಗಂಗಿ (28), ಪುನೆಮ್ ದೇವೆ (30), ಪಾರಸ್ಕಿ ಪಾಂಡೆ (22), ಮದ್ವಿ ಜೋಗ (20), ನುಪ್ಪೊ ಲಚ್ಚು (25), ಪೋಡಿಯಂ ಸುಖ್ರಾಮ್ (24) ಮತ್ತು ದುಧಿ ಭೀಮಾ ಅವರಿಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಮತ್ತು ಬಿಜೆಪಿ ನಾಯಕರು ಜಾತಿ ಗಣತಿ ವಿರುದ್ಧ ಹೇಗೆಲ್ಲ ದಾಳಿ ನಡೆಸಿದ್ದರು ಗೊತ್ತೆ?
“ಲೋಕೇಶ್ ವಿಭಾಗೀಯ ಸಮಿತಿ ಸದಸ್ಯರಾಗಿದ್ದರು ಮತ್ತು ಇತರ ಎಂಟು ಮಂದಿ ಪಿಎಲ್ಜಿಎ ಬೆಟಾಲಿಯನ್ ನಂ.1 ಮಾವೋವಾದಿಗಳ ಪಡೆಯ ಸದಸ್ಯರಾಗಿದ್ದರು. ಈ ಬೆಟಾಲಿಯನ್ ದುರ್ಬಲಗೊಳ್ಳುತ್ತಿದೆ ಮತ್ತು ಸುಕ್ಮಾ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸುತ್ತಿರುವುದರಿಂದ ಅದರ ಸದಸ್ಯರು ನಿರಂತರವಾಗಿ ನಕ್ಸಲ್ವಾದವನ್ನು ತ್ಯಜಿಸುತ್ತಿದ್ದಾರೆ” ಎಂದು ಚವಾಣ್ ಹೇಳಿದರು.
ಇನ್ನು ಶುಕ್ರವಾರ, ಅಭುಜ್ಮದ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಮತ್ತು 37.5 ಲಕ್ಷ ರೂ.ಗಳ ಸಾಮೂಹಿಕ ಬಹುಮಾನವನ್ನು ಹೊಂದಿದ್ದ 22 ನಕ್ಸಲ್ ನಾಯಕರು ನಾರಾಯಣಪುರ ಜಿಲ್ಲೆಯಲ್ಲಿ ಮುಖ್ಯವಾಹಿನಿಗೆ ಬಂದಿದ್ದಾರೆ. ಛತ್ತೀಸ್ಗಢದಲ್ಲಿ ನಿರಂತರವಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದ್ದು ನೂರಾರು ಮಂದಿಯ ಎನ್ಕೌಂಟರ್ ನಡೆದಿದೆ. ಈ ನಡುವೆ ಮಾವೋ ನಾಯಕರು ಮುಖ್ಯವಾಹಿನಿಗೆ ಮರಳುತ್ತಿದ್ದಾರೆ.





