ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಮೂರು ಆನೆಗಳು ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ಜಾರ್ಗ್ರಾಮ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಅರಣ್ಯ ಇಲಾಖೆ ಬೆಂಬಲಿತ ಹುಲಾ ಗುಂಪು ಆನೆಗಳನ್ನು ಓಡಿಸಲು ಯತ್ನಿಸುತ್ತಿದ್ದಾಗ ತಾಯಿ ಮತ್ತು ಮರಿ ಸೇರಿದಂತೆ ಮೂರು ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಜಾರ್ಗ್ರಾಮ ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಆಗ್ನೇಯ ರೈಲ್ವೆಯ ಖರಗ್ಪುರ ವಿಭಾಗದ ಬನ್ಸ್ತಲಾ ರೈಲ್ವೆ ನಿಲ್ದಾಣದ ಬಳಿ ಖರಗ್ಪುರಕ್ಕೆ ಹೋಗುವ ಜನಶತಾಬ್ದಿ ಎಕ್ಸ್ಪ್ರೆಸ್ ಬೆಳಗಿನ ಜಾ 1:45ರ ಸುಮಾರಿಗೆ ಆನೆಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಮಮತಾ ಬ್ಯಾನರ್ಜಿ ತಮ್ಮ ಸ್ವಂತ ತಂದೆಯನ್ನು ಮೊದಲು ಪತ್ತೆ ಹಚ್ಚಲಿ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ರಾಜ್ಯ ಅರಣ್ಯ ಸಚಿವ ಬಿರ್ಬಹಾ ಹನ್ಸ್ದ, “ಇದು ಅತ್ಯಂತ ದುಃಖಕರ ಘಟನೆ. ವೈಯಕ್ತಿಕವಾಗಿಯೂ ಸಹ, ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ಒಂದು ತಾಯಿ ಆನೆ, ಒಂದು ಮರಿ ಮತ್ತು ಇನ್ನೊಂದು ವಯಸ್ಕ ಆನೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದೆ. ನಾನು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಇನ್ನು ಆ ಪ್ರದೇಶದಲ್ಲಿ ಆನೆ ಓಡಾಟ ನಡೆಸುತ್ತಿರುವ ಬಗ್ಗೆ ರೈಲ್ವೆಗೆ ಗಂಟೆಗಳ ಹಿಂದೆಯೇ ತಿಳಿಸಲಾಗಿತ್ತು ಎಂದು ವರದಿಯಾಗಿದೆ. ಈ ಬಗ್ಗೆಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ. “ರಾತ್ರಿ 11 ಗಂಟೆ ಸುಮಾರಿಗೆ ನಾವು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದೆವು. ಆದರೂ ಘಟನೆ ಸಂಭವಿಸಿದೆ. ನಾವು ತನಿಖೆಗೆ ಆದೇಶಿಸಿದ್ದೇವೆ” ಎಂದು ಹೇಳಿದ್ದಾರೆ.





