ಪಶ್ಚಿಮ ಬಂಗಾಳದ ಜಲ್ಪಾಯ್ಗುರಿ ಹಾಗೂ ಮುಂತಾದ ಕಡೆ ನಿನ್ನೆ ಸಂಭವಿಸಿದ ಹಠಾತ್ ಚಂಡಮಾರುತ ದಿಂದ ಐವರು ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಚಂಡಮಾರುತದ ಜೊತೆ ಅಲಿಕಲ್ಲು ಮಳೆಯಿಂದ ಪ್ರವಾಹ ಉಂಟಾಗಿ 800ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಜಲ್ಪಾಯ್ಗುರಿ ಮತ್ತು ಪಕ್ಕದ ಮೈನಾಗುರಿ ಪ್ರದೇಶದ ಬಹುತೇಕ ಕಡೆಗಳಲ್ಲಿ ಬೀಸಿದ ರಭಸದ ಗಾಳಿಗೆ ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ನೂರಾರು ಎಕರೆ ಕೃಷಿ ಭೂಮಿ ಕೂಡ ನಾಶವಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಲ್ಪಾಯ್ಗುರಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಜನರನ್ನು ಭೇಟಿ ಮಾಡಿದರು. ಸ್ಥಳದಲ್ಲಿ ಪರಿಸ್ಥಿತಿಯ ಅವಲೋಕನ ನಡೆಸಿದ ಮಮತಾ ಮೃತಪಟ್ಟ ಕುಟುಂಬಗಳಿಗೆ ಸಾಂತ್ವಾನ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
ಚಂಡಮಾರುತದಿಂದ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಸ್ಸಾಂನಲ್ಲಿ ಭಾರಿ ಚಂಡ ಮಾರುತ: ದೋಣಿ ಮಗುಚಿ ಮೂವರ ಸಾವು
ಭಾರಿ ಚಂಡಮಾರುತ ಹಾಗೂ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಮಕ್ಕಳು ಒಳಗೊಂಡು ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 20 ಮಂದಿಯನ್ನು ರಕ್ಷಿಸಲಾಗಿದೆ.
ಅಸ್ಸಾಂನ ದಕ್ಷಿಣ – ಸಾಲ್ಮರ ಮನ್ಕಚಾರ್ ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ದೋಣಿ ಮಗುಚಿದೆ. ದೋಣಿ ಉರುಳಿದ ನಂತರ ಚಂಡಮಾರುತದಿಂದ ನೀರಿನ ಹರಿವು ಹೆಚ್ಚಾಗಿ ದುರಂತ ಸಂಭವಿಸಿದೆ. ದೋಣಿಯಿಂದ ಬಿದ್ದ ಪ್ರಯಾಣಿಕರನ್ನು ಮೀನುಗಾರರು ಹಾಗೂ ಅಧಿಕಾರಿಗಳು ರಕ್ಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಅಸ್ಸಾಂನಲ್ಲಿ ಏಪ್ರಿಲ್ 1ರಿಂದ 4ರವರೆಗೆ ಭಾರಿ ಮಳೆ ಬೀಳುವುದಾಗಿ ಆರೆಂಜ್ ಅಲರ್ಟ್ ನೀಡಿದೆ.





