ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಐವರು ಸರ್ಕಾರಿ ನೌಕರರನ್ನು ವಜಾಗೊಳಿಸಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದೇಶಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿನ್ಹಾ ನೇತೃತ್ವದ ಆಡಳಿತವು 2020ರಿಂದ ಈವರೆಗೆ 85 ಮಂದಿ ಸರ್ಕಾರಿ ನೌಕರರನ್ನು ಇದೇ ಆರೋಪಗಳ ಮೇಲೆ ವಜಾಗೊಳಿಸಿದೆ.
ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಹೊಂದಿರುವವರು ಸರ್ಕಾರಿ ಸಂಸ್ಥೆಗಳ ಅಂತರಿಕ ವಿಚಾರಗಳನ್ನು ಭಯೋತ್ಪಾದಕರಿಗೆ ರವಾನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿತ ಸರ್ಕಾರಿ ನೌಕರರನ್ನು ಸಂವಿಧಾನದ 311(2)(ಸಿ) ವಿಧಿಯ ಅಡಿಯಲ್ಲಿ ವಜಾಗೊಳಿಸಲಾಗಿದೆ. ಈ ವಿಧಿಯು ಔಪಚಾರಿಕ ವಿಚಾರಣೆ ಇಲ್ಲದೆ ನೌಕರರನ್ನು ವಜಾಗೊಳಿಸಲು ಅವಕಾಶ ನೀಡುತ್ತದೆ. ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ಆರೋಪಿಗಳ ವಿರುದ್ಧದ ತನಿಖೆ ನಡೆಸುವುದು ಪ್ರಯೋಗಿಕವಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.
ವಜಾಗೊಂಡವರಲ್ಲಿ ಶಿಕ್ಷಕ ಮೊಹಮ್ಮದ್ ಇಶ್ಫಾಕ್, ಪ್ರಯೋಗಾಲಯ ತಂತ್ರಜ್ಞ ತಾರಿಕ್ ಅಹ್ಮದ್ ಶಾ, ಸಹಾಯಕ ಲೈನ್ಮ್ಯಾನ್ ಬಶೀರ್ ಅಹ್ಮದ್ ಮಿರ್, ಅರಣ್ಯ ಇಲಾಖೆಯ ಕ್ಷೇತ್ರಪಾಲಕ ಫಾರೂಕ್ ಅಹ್ಮದ್ ಭಟ್ ಹಾಗೂ ಆರೋಗ್ಯ ಇಲಾಖೆಯ ಕಾರು ಚಾಲಕ ಮೊಹಮ್ಮದ್ ಯೂಸುಫ್ ಸೇರಿದ್ದಾರೆ.
ಆಪಾದಿತ ದಾಖಲೆಯ ಪ್ರಕಾರ, ಮೊಹಮ್ಮದ್ ಇಶ್ಫಾಕ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-ತೊಯ್ಬಾ’ (LeT) ಜೊತೆ ಸಂಬಂಧ ಹೊಂದಿದ್ದಾರೆ. ನೆರೆಯ ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಭಯೋತ್ಪಾದಕ’ನೆಂದು ಘೋಷಿಸಲಾದ ಎಲ್ಇಟಿ ಕಮಾಂಡರ್ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಖುಬೈಬ್ ಜೊತೆ ಅವರು ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ
2022ರ ಆರಂಭದಲ್ಲಿ ದೋಡಾದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗಾಗಿ, ಆ ಅಧಿಕಾರಿಯ ಚಲನವಲನವನ್ನು ಪಟ್ಟಿಮಾಡಲು ಇಶ್ಫಾಕ್ನನ್ನು ಎಲ್ಇಟಿ ನಿಯೋಜಿಸಿತ್ತು. ಈ ಯೋಜನೆ ಕಾರ್ಯಗತಗೊಳ್ಳುವ ಮೊದಲೇ ಅವರನ್ನು 2022ರ ಏಪ್ರಿಲ್ನಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.
ಮತ್ತೊಬ್ಬ ಆರೋಪಿ ತಾರಿಕ್ ಅಹ್ಮದ್ – ಚಿಕ್ಕ ವಯಸ್ಸಿನಿಂದಲೇ ಹಿಜ್ಬ್-ಉಲ್-ಮುಜಾಹಿದ್ದೀನ್ನ ಪ್ರಭಾವಕ್ಕೆ ಒಳಗಾಗಿದ್ದರು. 2005 ರಲ್ಲಿ ಹಿಜ್ಬ್-ಉಲ್ನ ನಾಯಕ ಅಮೀನ್ ಬಾಬಾ ಪಾಕಿಸ್ತಾನಕ್ಕೆ ಪರಾರಿಯಾಗಿದ್ದರ ಕುರಿತು ತನಿಖೆ ನಡೆಸುವಾಗ, ಆ ಸಂಘಟನೆಗೂ ತಾರಿಕ್ಗೂ ಸಂಪರ್ಕ ಇರುವುದನ್ನು ರಾಜ್ಯ ತನಿಖಾ ಸಂಸ್ಥೆ (SIA) ಬಹಿರಂಗಪಡಿಸಿತ್ತು ಎಂದು ಹೇಳಲಾಗಿದೆ.
ಬಶೀರ್ ಅಹ್ಮದ್ ಮಿರ್ ಅವರು ಮಿರ್ ಬಂಡಿಪೋರಾದ ಗುರೆಜ್ ಪ್ರದೇಶದಲ್ಲಿ ಎಲ್ಇಟಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಅಂತೆಯೇ, ಫಾರೂಕ್ ಅಹ್ಮದ್ ಮತ್ತು ಮೊಹಮ್ಮದ್ ಯೂಸುಫ್ ಕೂಡ ಹಿಜ್ಬ್-ಉಲ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ.




