ಮನೆಯ ಗೋಡೆ ಮೇಲೆ ಡೆತ್ನೋಟ್ ಬರೆದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಡೆತ್ನೋಟ್ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಶಿವಾನಿ ತಾಂಬೆ ಅಲಿಯಾಸ್ ನೇಹಾ ಅವರ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದ್ದರೆ, ಅವರ ಪತಿ ರಾಜ್ ತಾಂಬೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರಂಭದಲ್ಲಿ ಇದೊಂದು ಕೌಟುಂಬಿಕ ಕಲಹದಿಂದ ನಡೆದಿರುವ ಆತ್ಮಹತ್ಯೆಯೆಂದು ಭಾವಿಸಲಾಗಿತ್ತು. ಆದರೆ, ಗೋಡೆಯ ಮೇಲಿನ ಡೆತ್ನೋಟ್ನಿಂದಾಗಿ ಆತ್ಮಹತ್ಯೆಗೆ ಬೇರೆಯದ್ದೇ ಕಾರಣಗಳಿವೆ ಎಂಬುದು ಗೊತ್ತಾಗಿದೆ.
ಡೆತ್ನೋಟ್ನಲ್ಲಿ ರಾಜೇಶ್ ವಿಶ್ವಾಸ್ ಎಂಬ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನೂ ದಂಪತಿ ಉಲ್ಲೇಖಿಸಿದ್ದಾರೆ. ರಾಜೇಶ್ ಎಂಬಾತದ ತಮ್ಮ ದಾಂಪತ್ಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾನೆ. ಆತನಿಂದಾಗಿಯೇ ತಾವು ಸಾವಿನ ನಿರ್ಧಾರ ಮಾಡಿದ್ದಾಗಿ ಬರೆಯಲಾಗಿದೆ. ಜೊತೆಗೆ, ‘ಮಕ್ಕಳೇ, ನಾವು ನಿಮ್ಮನ್ನು ಪ್ರೀತಿಸುತ್ತೇವೆ’ ಎಂದು ಬರೆದಿದ್ದಾರೆ.
ದಂಪತಿಗಳು 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ, ಕೆಲವು ತಿಂಗಳುಗಳಿಂದ ದಂಪತಿ ನಡುವೆ ಬಿರುಕು ಮೂಡಿತ್ತು ಎಂದು ಹೇಳಲಾಗಿದೆ. ಅವರ ನಡುವಿನ ಬಿರುಕು ಮತ್ತು ಜಗಳಕ್ಕೆ ರಾಜೇಶ್ ಕಾರಣವೆಂದು ಆರೋಪಿಸಲಾಗಿದೆ.
ಆದಾಗ್ಯೂ, ನೇಹಾಳನ್ನು ರಾಜ್ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




