ಆಧಾರ್ ಕಾರ್ಡ್ನಲ್ಲಿರುವ ವೈಯಕ್ತಿಕ ಮಾಹಿತಿಯ ದುರುಪಯೋಗ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ UIDAI ಮಹತ್ವದ ಕ್ರಮಕ್ಕೆ ಮುಂದಾಗಿದೆ. ಡಿಸಂಬರ್ನಲ್ಲಿ ಹೊಸ ಮಾದರಿಯ Aadhaar ಕಾರ್ಡ್ಗಳನ್ನು ವಿತರಣೆ ಮಾಡಲು ಸರ್ಕಾರ ಸಜ್ಜಾಗಿದೆ. ಹೊಸ ಕಾರ್ಡ್ನಲ್ಲಿ ವ್ಯಕ್ತಿಯ ಹೆಸರು, ವಿಳಾಸ, ಜನ್ಮದಿನಾಂಕ ಮತ್ತು ಆಧಾರ್ ನಂಬರ್ ಯಾವುದೂ ಕಾಣುವುದಿಲ್ಲ. ಕಾರ್ಡ್ನಲ್ಲಿ ಕೇವಲ ವ್ಯಕ್ತಿಯ ಫೋಟೋ ಮತ್ತು QR ಕೋಡ್ ಮಾತ್ರ ಇರುವಂತೆ ವಿನ್ಯಾಸ ಮಾಡಲಾಗಿದೆ.
ವರದಿಗಳ ಪ್ರಕಾರ, UIDAI ಪ್ರಸ್ತಾಪಿಸಿರುವ ಈ ಹೊಸ ಕ್ರಮವು ಆಧಾರ್ ಡೇಟಾದ ಭದ್ರತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಈಗಿನ ಕಾರ್ಡ್ಗಳಲ್ಲಿ ಇದ್ದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಭೀತಿ ಇರುವುದರಿಂದ ಈ ಬದಲಾವಣೆ ಅಗತ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವ್ಯವಸ್ಥೆ ಜಾರಿಯಾದ ನಂತರ, ಆಫ್ಲೈನ್ ಆಧಾರ್ ವೆರಿಫಿಕೇಶನ್ ವಿಧಾನವನ್ನು ಹಂತ ಹಂತವಾಗಿ ಕೈಬಿಡಲಾಗುವುದು.
ಇನ್ನು ಮುಂದೆ ಆಧಾರ್ ಆಧಾರಿತ ಗುರುತಿನ ಪರಿಶೀಲನೆ ಆನ್ಲೈನ್ನಲ್ಲಿ ಮಾತ್ರ ಸಾಧ್ಯ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ UIDAI ಡೇಟಾಬೇಸ್ನಿಂದ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಅಗತ್ಯ ವಿವರಗಳನ್ನು ಪಡೆಯಲು ಅವಕಾಶ ಇರುತ್ತದೆ. ಹೀಗಾಗಿ ಅನಧಿಕೃತ ವ್ಯಕ್ತಿಗಳು ಕಾರ್ಡ್ನ ಮೂಲಕ ಯಾವುದೇ ಮಾಹಿತಿಯನ್ನು ಪಡೆಯುವ ಅವಕಾಶವೇ ಇರುವುದಿಲ್ಲ.
ಇದನ್ನು ಓದಿದ್ದೀರಾ? ತಂತ್ರಜ್ಞಾನವು ಸಿನಿಮಾದಲ್ಲಿ ಏಕರೂಪತೆ ಹೇರುತ್ತಿದೆ: ನಿರ್ದೇಶಕ ಗಿರಿರಾಜ್
UIDAI ಜಾರಿಗೆ ತರಲಿರುವ ಈ ಕ್ರಮವು Aadhaar ಕಾಯ್ದೆಗೆ ಪೂರಕವಾಗಿದೆ. ಕಾಯ್ದೆಯ ಪ್ರಕಾರ, ವ್ಯಕ್ತಿಯ ಆಧಾರ್ ನಂಬರ್ ಅಥವಾ ಬಯೋಮೆಟ್ರಿಕ್ ಮಾಹಿತಿಯನ್ನು ಯಾರೂ ಸಂಗ್ರಹಿಸಬಾರದು, ಹಂಚಿಕೊಳ್ಳಬಾರದು. QR ಕೋಡ್ ಆಧಾರಿತ ಪರಿಶೀಲನೆ ವ್ಯವಸ್ಥೆ ಈ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವಲ್ಲಿ ಸಹಕಾರಿಯಾಗಿದೆ.
ಆಧಾರ್ ಪರಿಶೀಲನೆ ಮಾಡುವಾಗ ವ್ಯಕ್ತಿಯ ಅನುಮತಿ ಅವಶ್ಯ. OTP, ಬೆರಳಚ್ಚು (ಫಿಂಗರ್ಪ್ರಿಂಟ್) ಅಥವಾ ಕಣ್ಣಿನ ಸ್ಕ್ಯಾನ್ (ಐರಿಸ್) ಮೂಲಕ ಒಪ್ಪಿಗೆ ಪಡೆದ ನಂತರವೇ ವೆರಿಫಿಕೇಶನ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂ. ವರೆಗೆ ದಂಡ ವಿಧಿಸಬಹುದು ಎಂದು UIDAI ತಿಳಿಸಿದೆ.
ಹೊಸ ಆಧಾರ್ ಕಾರ್ಡ್ ಬಂದರೆ ಜನರ ವೈಯಕ್ತಿಕ ಮಾಹಿತಿ ಇನ್ನಷ್ಟು ಸುರಕ್ಷಿತವಾಗುತ್ತದೆ. QR ಕೋಡ್ ಮೂಲಕ ಮಾತ್ರ ವಿವರಗಳನ್ನು ಪಡೆಯಲು ಸಾಧ್ಯವಾಗುವುದರಿಂದ, ಕಾರ್ಡ್ನ್ನು ತಪ್ಪಾಗಿ ಬಳಸಿ ದುರುಪಯೋಗ ಮಾಡುವ ಅವಕಾಶ ಬಹಳಷ್ಟು ಕಡಿಮೆಯಾಗುತ್ತದೆ.





