ಗರ್ಭಧಾರಣೆಯ ಕೊನೆಯ ವಾರಗಳು, ಹೆರಿಗೆ ಮತ್ತು ಆರೈಕೆಗಾಗಿ ಆಸ್ಪತ್ರೆಯ ಹುಡುಕಾಟ, ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ, ದಣಿವು, ನೋವು – ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ಆಸ್ಪತ್ರೆ ಸೌಲಭ್ಯ ಸಿಗದೆ ಅಲೆದಾಡಿದ ಗರ್ಭಿಣಿ ಉಬಿದಿ ರೇಖಾ ಅವರ ಸಂಕಷ್ಟದ ಕತೆ. “ನನ್ನ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ, ನಾನು ತಾಯಿಯಾಗಲು ಸಾಧ್ಯವಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ರಾಮಕೃಷ್ಣ ಕಾಲೋನಿ ನಿವಾಸಿ ಉಬಿದಿ ರೇಖಾ (23) ಅವರು ‘ಬೇಡ ಬುಡಗ ಜಂಗಮ’ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದರು. ಆದರೆ, ಅವರ ಬಳಿ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕಾಗಿ ಅವರನ್ನು ಯಾವುದೇ ಆಸ್ಪತ್ರೆಯಲ್ಲಿಯೂ ದಾಖಲು ಮಾಡಿಕೊಳ್ಳಲಿಲ್ಲ. ಬದಲಾಗಿ, ‘ಆಧಾರ್ ಕಾರ್ಡ್ ಕೊಡಿ, ಇಲ್ಲವೇ ಬೇರೆ ಆಸ್ಪತ್ರೆಗೆ ಹೋಗಿ’ ಎಂದೇ ಹೇಳಿ ಕಳಿಸಲಾಗುತ್ತಿತ್ತು. ಇದು ಕೇವಲ ರೇಖಾ ಅವರ ಸಂಕಷ್ಟ ಮಾತ್ರವಲ್ಲ, ಅಲ್ಲಿನ ಪ್ರತಿಯೊಬ್ಬರ ಕತೆಯೂ ಇಂತಹದ್ದೇ ವ್ಯಥೆಗಳಿಂದ ಕೂಡಿದೆ.
ರಾಮಕೃಷ್ಣ ಕಾಲೋನಿಯ ಬಹುಸಂಖ್ಯಾತರು ಬೇಡ ಬುಡಗ ಜಂಗಮ ಸಮುದಾಯಕ್ಕೆ ಸೇರಿದವರು. ಅವರ ಬದುಕು ಉದ್ಯೋಗಕ್ಕಾಗಿನ ವಲಸೆಯಿಂದಲೇ ಕೂಡಿದೆ. ದಿನಗೂಲಿ ಕೆಲಸವನ್ನು ಹುಡುಕುತ್ತಾ ರಾಜ್ಯಾದ್ಯಂತ ಪ್ರಯಾಣಿಸುವುದು ಅವರ ಬದುಕಿನ ಭಾಗವೇ ಆಗಿಹೋಗಿದೆ. ರೇಖಾ ತಂದೆ-ತಾಯಿಯೂ ಇದೇ ರೀತಿಯ ವಲಸೆಯಲ್ಲಿದ್ದಾಗಲೇ ರೇಖಾ ಜನಿಸಿದ್ದರು. ಅವರ ಜನನವನ್ನು ಪೋಷಕರು ನೋಂದಾಯಿಸಿಲ್ಲ.
ಈ ಒಂದೇ ಒಂದು ಲೋಪವು ಅವರು 23 ವರ್ಷ ವಯಸ್ಸು ಪೂರೈಸಿ, ವಿವಾಹವಾಗಿ, ತನ್ನ ಮಗುವಿಗೆ ಜನ್ಮ ನೀಡುವ ಸಮಯದವರೆಗೂ ಅವರ ಬೆನ್ನತ್ತಿದೆ. ಜನನ ದಾಖಲೆ ಇಲ್ಲದೆ, ಅವರು ಆಧಾರ್ ಪಡೆಯಲು ಸಾಧ್ಯವಾಗಿಲ್ಲ. ಈಗ, ಆಧಾರ್ ಇಲ್ಲದೆ, ಅವರು ಕಲ್ಯಾಣ ಯೋಜನೆಗಳು, ಆರೋಗ್ಯ ಸೌಲಭ್ಯಗಳು ಹಾಗೂ ಸುರಕ್ಷಿತ ಹೆರಿಗೆಯನ್ನೂ ಪಡೆಯಲಾಗುತ್ತಿಲ್ಲ. ಅವರು ಈಗ ಹೆರಿಗೆ ಸೌಲಭ್ಯಕ್ಕಾಗಿ ಹೆಣಗಾಡುತ್ತಿದ್ದಾರೆ.
ರೇಖಾ ಅವರು ತಮ್ಮ ಹೆರಿಗೆಗಾಗಿ ಕರೀಂನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಹೆರಿಗೆಗೆ ದಾಖಲಾಗಲು ಆಧಾರ್ ಕಾರ್ಡ್ನ ಅಗತ್ಯವಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿ ಹೊರ ಕಳಿಸುತ್ತಿದ್ದಾರೆ. ಈಗ, ಅವರಿಗೆ ಇರುವ ಏಕೈಕ ಆಯ್ಕೆ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು. ಆದರೆ, ಖಾಸಗಿ ಆಸ್ಪತ್ರೆಗಳ ವೆಚ್ಚವನ್ನು ಭರಿಸುವ ಸಾಮರ್ಥ್ಯ ಕುಟುಂಬಕ್ಕಿಲ್ಲ.

ಆಧಾರ್ ಕಾರ್ಡ್ ಕಾರಣಕ್ಕಾಗಿ ವೈದ್ಯಕೀಯ ನೆರವನ್ನು ನಿರಾಕರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಜಿಲ್ಲಾ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಜಿ. ವೀರಾ ರೆಡ್ಡಿ, “ಆಧಾರ್ಅನ್ನು ಗುರುತಿನ ಪುರಾವೆಯಾಗಿ ಕೇಳಲಾಗುತ್ತದೆ. ಅದು ಇಲ್ಲದ ರೋಗಿಗಳನ್ನು ‘ಅಪರಿಚಿತ ವ್ಯಕ್ತಿಗಳು’ ಎಂದು ಪರಿಗಣಿಸಲಾಗುತ್ತದೆ. ಆ ಕುರಿತು ಪೊಲೀಸ್ ಹೊರಠಾಣೆಯಲ್ಲಿ ವರದಿ ಮಾಡಲಾಗುತ್ತದೆ. ಆದರೆ ಆರೈಕೆಯನ್ನು ನಿರಾಕರಿಸಲಾಗುವುದಿಲ್ಲ. ಯಾವುದೇ ಸಮಸ್ಯೆಗಳು ಎದುರಾದರೆ, ಅವರು ನಮ್ಮ ಗಮನಕ್ಕೆ ತರಬೇಕು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಕೋವಿಡ್ ಲಸಿಕೆ ಲೂಟಿಯ ಕುಬೇರನಿಗೆ ಆರ್ಸಿಬಿ ಮೇಲೆ ಕಣ್ಣು!
ಆದಾಗ್ಯೂ, ಆಧಾರ್ ಕಾರ್ಡ್ ಕಾರಣಕ್ಕಾಗಿಯೇ ನಿಯಮ ಮತ್ತು ಆಸ್ಪತ್ರೆಗಳ ನಡುವಿನ ಅಂತರ ಉಳಿದಿದೆ. ರೇಖಾ ಅವರು ಹೆರಿಗೆ ಸಮಯದಲ್ಲಿ ಆರೋಗ್ಯ ಸೌಲಭ್ಯಗಳ ನಿರಾಕರಣೆಯಿಂದ ಆತಂಕಕಾರಿ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಎಲ್ಲಿ ಹೆರಿಗೆಗೆ ದಾಖಲಾಗುತ್ತಾರೆ ಎಂಬುದು ಇನ್ನೂ ಗೊಂದಲದಲ್ಲಿಯೇ ಉಳಿದಿದೆ.
ಸದ್ಯಕ್ಕೆ, ಸ್ಥಳೀಯ ರಾಜಕೀಯ ನಾಯಕರ ನೆರವಿನಿಂದ ರೇಖಾ ಅವರಿಗೆ ಗ್ರಾಮ ಪಂಚಾಯತಿಯಿಂದ ನಿವಾಸ ಪ್ರಮಾಣಪತ್ರ ದೊರೆತಿದೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಆಧಾರ್ ಪೋರ್ಟಲ್ ರೇಖಾ ಅವರ ವಿವರಗಳನ್ನು ಸ್ವೀಕರಿಸದ ಕಾರಣ, ಅವರ ಆಧಾರ್ಗಾಗಿನ ಅರ್ಜಿ ಸ್ಥಗಿತಗೊಂಡಿದೆ.
ನಿವಾಸ, ಜನನ, ವಲಸೆ ಹಾಗೂ ದಾಖಲೆಗಳ ಕೊರತೆಯಿಂದಾಗಿ ಅಲೆಮಾರಿ ಸಮುದಾಯಗಳ ಅನೇಕ ಮಹಿಳೆಯರು ಮತ್ತು ಮಕ್ಕಳು ಔಪಚಾರಿಕ ದಾಖಲೆಗಳಿಂದ ಹೊರಗುಳಿದಿದ್ದಾರೆ. ಪರಿಣಾಮವಾಗಿ, ಮಕ್ಕಳು ಶಿಕ್ಷಣವನ್ನು ಪಡೆಯಲಾಗುತ್ತಿಲ್ಲ. ಕುಟುಂಬಗಳು ಅಲೆಮಾರಿ ಸಮುದಾಯಕ್ಕಾಗಿಯೇ ಇರುವ ಕಲ್ಯಾಣ ಯೋಜನೆಗಳನ್ನೂ ಪಡೆಯಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಇರುವ ಪ್ರಶ್ನೆ, ಇಂತಹ ಲಕ್ಷಾಂತರ ಕುಟುಂಬಗಳು ದೇಶದಲ್ಲಿವೆ. ಹೆರಿಗೆಗೆ ಅವಕಾಶ ದೊರೆಯದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಹೀಗಿರುವಾಗ, ಈ ಕುಟುಂಬಗಳು ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಪ್ರಕ್ರಿಯೆಗೆ ದಾಖಲೆಗಳನ್ನು ಹೇಗೆ ಒದಗಿಸಲು ಸಾಧ್ಯ? ಮೋದಿ ಸರ್ಕಾರದ ದಬ್ಬಾಳಿಕೆಗೆ ಈ ಕುಟುಂಬಗಳು ಮತದಾನದ ಹಕ್ಕು ಮಾತ್ರವಲ್ಲ, ಪೌರತ್ವವನ್ನೂ ಕಳೆದುಕೊಳ್ಳುವ ಅಪಾಯವಿದೆ!




