ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರ ಇನ್ನೂ ಪ್ರಕಟಗೊಳ್ಳದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಎಂಬ ಆತ್ಮಚರಿತ್ರೆಯ ಕೆಲವು ಪುಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ದೆಹಲಿ ಪೊಲೀಸರು ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಅಪ್ರಕಟಿತ ಕೃತಿಯು ಇದೀಗ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ರಾಜಕೀಯ ಸಂಚಲನವನ್ನು ಮೂಡಿಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪುಸ್ತಕದ ಆಯ್ದ ಭಾಗಗಳನ್ನು ಉಲ್ಲೇಖಿಸಿ, 2020ರ ಲಡಾಖ್ ಸಂಘರ್ಷದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸದನದಲ್ಲಿ ಗಂಭೀರ ಆರೋಪ ಹೊರಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಲೋಕಸಭಾ ಸ್ಪೀಕರ್ ಮತ್ತು ರಕ್ಷಣಾ ಸಚಿವರು ಈ ಪುಸ್ತಕ ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಇದು ನರವಣೆ ಅವರ ಸ್ವಂತ ಅನುಭವದ ಬರಹವಾಗಿದ್ದು, ಲಡಾಖ್ನಲ್ಲಿ ನಡೆದ ನೈಜ ಸಂಗತಿಗಳನ್ನು ವಿವರಿಸುತ್ತದೆ,” ಎಂದು ಪ್ರತಿಪಾದಿಸಿದ್ದಾರೆ. ಅತ್ತ ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಈ ಜಟಾಪಟಿಯ ನಡುವೆ, ನರವಣೆ ಅವರ ಪುಸ್ತಕದ ವಿಚಾರವಾಗಿ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಸಾಧ್ಯತೆಗಳೂ ದಟ್ಟವಾಗಿವೆ ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ನಡೆನುಡಿ ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯದ ಸಾರಾಸಗಟು ಉಲ್ಲಂಘನೆಯಿದು!
ರಾಹುಲ್ ಗಾಂಧಿ ಅವರು ಅಪ್ರಕಟಿತ ಪುಸ್ತಕದ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಿರುವುದು, ನಿವೃತ್ತ ಸೇನಾ ಅಧಿಕಾರಿಗಳಿಗೆ ಅನ್ವಯಿಸುವ ಕಟ್ಟುನಿಟ್ಟಿನ ನಿಯಮಗಳತ್ತ ಬೆಳಕು ಚೆಲ್ಲಿದೆ. ಅಧಿಕೃತ ರಹಸ್ಯ ಕಾಯ್ದೆಯ (Official Secrets Act) ಅನ್ವಯ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನಿರ್ವಹಿಸಿದ ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರವೂ ಅಂತಹ ಮಾಹಿತಿಗಳನ್ನು ಬಹಿರಂಗಪಡಿಸುವಂತಿಲ್ಲ. ವಾಣಿಜ್ಯ ಅಥವಾ ಖಾಸಗಿ ಉದ್ಯೋಗಗಳಿಗೆ ಒಂದು ವರ್ಷದ ‘ಕೂಲಿಂಗ್ ಆಫ್’ ಅವಧಿ ಇದ್ದರೂ, ರಹಸ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಣೆಗೆ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದರ ಜತೆಗೆ, ಸಿ.ಸಿ.ಎಸ್ (ಪಿಂಚಣಿ) ನಿಯಮಗಳ ಅನ್ವಯ ಸಂಬಂಧಿತ ಅಧಿಕಾರಿಯ ಪಿಂಚಣಿಯನ್ನು ಭಾಗಶಃ ಅಥವಾ ಪೂರ್ಣವಾಗಿ ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿದೆ.
ಜನರಲ್ ನರವಣೆ ಅವರು ಡಿಸೆಂಬರ್ 31, 2019 ರಿಂದ ಏಪ್ರಿಲ್ 30, 2022 ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು. 2020ರ ಮೇ-ಜೂನ್ ಅವಧಿಯಲ್ಲಿ ಪೂರ್ವ ಲಡಾಖ್ ಮತ್ತು ಸಿಕ್ಕಿಂ ಗಡಿಗಳಲ್ಲಿ (LAC) ಚೀನಾ ಜತೆಗಿನ ಸಂಘರ್ಷ ಹಾಗೂ ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರ ಹುತಾತ್ಮತೆಗೆ ಸಾಕ್ಷಿಯಾದ ಸಂದರ್ಭದಲ್ಲಿ ಅವರೇ ಸೇನೆಯ ನೇತೃತ್ವ ವಹಿಸಿದ್ದರು. ಅವರ ಪುಸ್ತಕದಲ್ಲಿ ಅಗ್ನಿಪಥ್ ಯೋಜನೆ ಮತ್ತು ಚೀನಾ ಗಡಿ ತಂಟೆಯ ಸೂಕ್ಷ್ಮ ವಿವರಗಳಿರುವುದರಿಂದ ರಕ್ಷಣಾ ಸಚಿವಾಲಯದ ಅನುಮತಿ ಬಾಕಿ ಇದ್ದು, ಪುಸ್ತಕ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.





