‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದೇಶದ ಜನರಿಂದ ಬರೋಬ್ಬರಿ ₹54,000 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದು “ಬಹಿರಂಗ ದರೋಡೆ ಅಥವಾ ಡಕಾಯಿತಿಗೆ” ಕಡಿಮೆಯೇನಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ವಂಚನೆಯ ಗಂಭೀರತೆಯನ್ನು ಎತ್ತಿ ಹಿಡಿದಿದೆ. “ಡಿಜಿಟಲ್ ವಂಚನೆಯ ಮೂಲಕ ಕಳೆದುಕೊಂಡಿರುವ ಈ ಹಣವು, ದೇಶದ ಹಲವು ಸಣ್ಣ ರಾಜ್ಯಗಳ ವಾರ್ಷಿಕ ಬಜೆಟ್ಗಿಂತಲೂ ಹೆಚ್ಚಾಗಿದೆ” ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ.
“ಇಂತಹ ಬೃಹತ್ ಪ್ರಮಾಣದ ವಂಚನೆಗಳು ಬ್ಯಾಂಕ್ ಅಧಿಕಾರಿಗಳ ಶಾಮೀಲಾಗುವಿಕೆ ಅಥವಾ ಅವರ ನಿರ್ಲಕ್ಷ್ಯವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸೈಬರ್ ವಂಚನೆಗಳನ್ನು ತಡೆಗಟ್ಟಲು ಡೆಬಿಟ್ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕುರಿತು ಆರ್ಬಿಐ ಈಗಾಗಲೇ ಎಸ್ಒಪಿ ರೂಪಿಸಿದೆ ಎಂದು ಕೋರ್ಟ್ ಗಮನಿಸಿದೆ.
ಈ ಪಿಡುಗನ್ನು ನಿಯಂತ್ರಿಸಲು ಗೃಹ ಸಚಿವಾಲಯವು, ಆರ್ಬಿಐನ ಎಸ್ಒಪಿ ಹಾಗೂ ದೂರಸಂಪರ್ಕ ಇಲಾಖೆ ತೆಗೆದುಕೊಂಡಿರುವ ನಿರ್ಧಾರಗಳನ್ನು ಪರಿಶೀಲಿಸಬೇಕು. ಇದರ ಆಧಾರದ ಮೇಲೆ ಮುಂದಿನ ನಾಲ್ಕು ವಾರಗಳ ಒಳಗಾಗಿ ಕರಡು ತಿಳಿವಳಿಕೆ ಒಪ್ಪಂದವನ್ನು ಸಿದ್ಧಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ|ಮೋದಿ ರಾಜಿ ರಾಜಕಾರಣದಿಂದ ಭಾರತದ ಸ್ವಾಭಿಮಾನ- ಸಾರ್ವಭೌಮತೆಗೆ ಧಕ್ಕೆ
ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಗುರುತಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡುವಂತೆ ಗುಜರಾತ್ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ವಂಚನೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆರ್ಬಿಐ, ದೂರಸಂಪರ್ಕ ಇಲಾಖೆ ಮತ್ತು ಇತರ ಮಧ್ಯಸ್ಥಗಾರರು ಜಂಟಿ ಸಭೆ ನಡೆಸಿ ಚೌಕಟ್ಟು ರೂಪಿಸಬೇಕು. ಪರಿಹಾರ ನೀಡುವಾಗ “ಪ್ರಾಯೋಗಿಕ ಮತ್ತು ಉದಾರ” ನಿಲುವು ತಳೆಯಬೇಕೆಂದು ಪೀಠ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಿಗದಿಪಡಿಸಲಾಗಿದ್ದು, ಅಷ್ಟರೊಳಗೆ ಹೊಸ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಳೆದ ಡಿಸೆಂಬರ್ 1 ರಂದು, ಇಂತಹ ಅಪರಾಧಗಳಿಗೆ ಬಳಸಲಾಗುವ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲು ಮತ್ತು ಸ್ಥಗಿತಗೊಳಿಸಲು ‘ಕೃತಕ ಬುದ್ಧಿಮತ್ತೆ’ಯನ್ನು (AI) ಏಕೆ ಬಳಸುತ್ತಿಲ್ಲ ಎಂದು ಆರ್ಬಿಐ ಅನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
ಡಿಜಿಟಲ್ ಅರೆಸ್ಟ್ ಎಂದರೇನು?
ಇದು ಇತ್ತೀಚೆಗೆ ಹೆಚ್ಚಾಗುತ್ತಿರುವ ಒಂದು ಬಗೆಯ ಸೈಬರ್ ಅಪರಾಧವಾಗಿದೆ. ಇದರಲ್ಲಿ ವಂಚಕರು ಪೊಲೀಸ್, ಸಿಬಿಐ, ಕಸ್ಟಮ್ಸ್ ಅಥವಾ ಇತರ ಸರ್ಕಾರಿ ಅಧಿಕಾರಿಗಳಂತೆ ನಟಿಸಿ ವಿಡಿಯೋ ಅಥವಾ ಆಡಿಯೋ ಕರೆ ಮಾಡುತ್ತಾರೆ. “ನಿಮ್ಮ ಹೆಸರಿನಲ್ಲಿ ಅಕ್ರಮ ಪಾರ್ಸೆಲ್ ಬಂದಿದೆ” ಅಥವಾ “ನೀವು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀರಿ” ಎಂದು ಬೆದರಿಸಿ, ಸಂತ್ರಸ್ತರನ್ನು ‘ವರ್ಚುವಲ್’ ಆಗಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತಾರೆ ಮತ್ತು ಬಂಧನದ ಭೀತಿ ಹುಟ್ಟಿಸಿ ಹಣ ವರ್ಗಾಯಿಸುವಂತೆ ಒತ್ತಾಯಿಸುತ್ತಾರೆ.





