ದರೋಡೆ ಪ್ರಕರಣದಲ್ಲಿ ಅಪರಾಧ ಸಾಬೀತಾಗದೇ ಇದ್ದರೂ ಕಳೆದ 24 ವರ್ಷಗಳಿಂದ ಜೈಲಿನಲ್ಲಿದ್ದ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ಆಝಾದ್ ಖಾನ್ ಖುಲಾಸೆಗೊಂಡ ಆರೋಪಿ. ಕೇವಲ ಆರೋಪಿಯ ತಪ್ಪೊಪ್ಪಿಗೆ ಮೇಲೆ ಆರೋಪಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿ ಶಿಕ್ಷೆ ವಿಧಿಸಲಾಗಿದೆ. ಆದರೆ, ಅಪರಾಧವನ್ನು ಸಾಬೀತು ಮಾಡುವಲ್ಲಿ ತನಿಖಾಧಿಕಾರಿಗಳು ಮತ್ತು ವಿಚಾರಣಾ ನ್ಯಾಯಾಲಯವು ವಿಫಲವಾಗಿವೆ. ಅಪರಾಧ ಸಾಬೀತಾಗದೆ, ತಪ್ಪೊಪ್ಪಿಗೆ ಹೇಳಿಕೆ ಕಾರಣಕ್ಕೆ ಶಿಕ್ಷೆ ವಿಧಿಸಿರುವುದು ಗಂಭೀರ ಲೋಪವೆಂದು ಹೈಕೋರ್ಟ್ ಹೇಳಿದೆ. ಪ್ರಕರಣದಿಂದ ಆರೋಪಿಯನ್ನು ಮುಕ್ತಗೊಳಿಸಿ, ಬಿಡುಗಡೆಗೆ ಆದೇಶಿಸಿದೆ.
2000ದ ಅಕ್ಟೋಬರ್ 29ರಂದು ಮೈನ್ಪುರಿ ಜಿಲ್ಲೆಯ ಕತ್ರಾ ಗ್ರಾಮದಲ್ಲಿ ಡಕಾಯಿತರ ಗುಂಪೊಂದು ದರೋಡೆ ನಡೆಸಿತ್ತು. ಪಾರಾರಿಯಾಗುವಾಗ ಗ್ರಾಮಸ್ಥರ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದರು. ಡಕಾಯಿತರ ಗುಂಪಿನ 7 ಮಂದಿಯನ್ನು ಗ್ರಾಮಸ್ಥರು ಗುರುತಿಸಿದ್ದಾರೆ ಎಂದು ಹೇಳಲಾಗಿತ್ತು. ಅವರಲ್ಲಿ, ಆಝಾದ್ ಖಾನ್ ಕೂಡ ಒಬ್ಬರು ಎಂದು ಹೇಳಲಾಗಿದೆ.
ಆಝಾದ್ ಖಾನ್ ಸೇರಿದಂತೆ ಗ್ರಾಮಸ್ಥರು ಗುರುತಿಸಿದ್ದ 7 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣವನ್ನು ಮೈನ್ ಪುರಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಈ ವೇಳೆ, ಆಝಾದ್ ಖಾನ್ ತಪ್ಪೊಪ್ಪಿಗೆ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅವರ ಹೇಳಿಕೆ ಆಧಾರದ ಮೇಲೆ ನ್ಯಾಯಾಲಯವು ಐಪಿಸಿ ಸೆಕ್ಷನ್ 395 (ಡಕಾಯಿತಿ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 397 (ಕೊಲೆ ಯತ್ನದೊಂದಿಗೆ ಡಕಾಯಿತಿ) ಅಡಿಯಲ್ಲಿ 7 ವರ್ಷಗಳ ಜೈಲು ಶಿಕ್ಷೆ ಇಧಿಸಿ ತೀರ್ಪು ನೀಡಿತ್ತು.
ಈ ಲೇಖನ ಓದಿದ್ದೀರಾ?: ವಾರಕ್ಕೆ 80 ತಾಸು ದುಡಿಯುತ್ತಿರುವ ಮಹಿಳೆಯರು! AI ಬಂದರೂ ನಾರಿಗಿಲ್ಲ ವೇತನರಹಿತ ಕೆಲಸದಿಂದ ಮುಕ್ತಿ
ಆದಾಗ್ಯೂ, ತನಿಖಾಧಿಕಾರಿಗಳು ಮತ್ತು ನ್ಯಾಯಾಲಯವು ಪ್ರಕರಣವನ್ನು ಸಾಬೀತುಪಡಿಸಿರಲಿಲ್ಲ. ಹೀಗಾಗಿ, ಆರೋಪಿ ಆಝಾದ್ ಖಾನ್ ಸಂಬಂಧಿಕರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರಿದ್ದ ಪೀಠವು, “ಅಪರಾಧ ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಪ್ರಕರಣದಲ್ಲಿ ಯಾವುದೇ ನೇರ ಪುರಾವೆ ಅಥವಾ ಪ್ರತ್ಯಕ್ಷದರ್ಶಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ. ಸಾಕ್ಷ್ಯವನ್ನು ಒದಗಿಸಲಾಗಿಲ್ಲ. ಕೇವಲ ತಪ್ಪೊಪ್ಪಿಗೆ ಆದಾರದಲ್ಲಿ ಶಿಕ್ಷೆ ವಿಧಿಸುವುದು ಗಂಭೀರ ಲೋಪವಾಗಿದೆ” ಎಂದು ಹೇಳಿದೆ.
ಅಲ್ಲದೆ, ಆರೋಪಿಯು ತನ್ನ ತಪ್ಪೊಪ್ಪಿಗೆ ಅರ್ಜಿಗಳಲ್ಲಿ, ಜೈಲಿನಿಂದ ಬಿಡುಗಡೆಯಾದ ನಂತರ ತಮ್ಮನ್ನು ದೂರುದಾರು ಕೊಲ್ಲಬಹುದು ಎಂಬ ಭವಿವಿದೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣದಿಂದ ಆರೋಪಿ ಆಝಾದ್ ಖಾನ್ ಅರನ್ನು ಖುಲಾಸೆಗೊಳಿಸಿದ್ದು, ಬಿಡುಗಡೆಗೆ ಆದೇಶಿಸಿದೆ.




