ಬಿಹಾರ ಎನ್ಡಿಎ ಸರ್ಕಾರವು ಭಾಗಲಪುರ ಜಿಲ್ಲೆಯ ಪೀರ್ಪೈಂಟಿ ಪ್ರದೇಶದಲ್ಲಿರುವ 1,020.60 ಏಕರೆ ಸರ್ಕಾರಿ ಸ್ವಾಧೀನದ ಭೂಮಿಯನ್ನು ಅದಾನಿ ಪವರ್ ಕಂಪನಿಗೆ ಪ್ರತಿ ವರ್ಷ ಕೇವಲ 1 ರೂಪಾಯಿಗೆ 30 ವರ್ಷಗಳ ಕಾಲ ಬಾಡಿಗೆಗೆ ನೀಡಲು ತೀರ್ಮಾನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಭೂಮಿಯ ಮೇಲೆ ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷಗಳು ಮತ್ತು ಸ್ಥಳೀಯರು ಗಂಭೀರವಾಗಿ ಪ್ರಶ್ನಿಸುತ್ತಿದ್ದು, ಆ ಪ್ರದೇಶದಲ್ಲಿರುವ ಸುಮಾರು 10 ಲಕ್ಷ ಮಾವಿನ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ವರದಿ ಪರಿಸರ ಹಾನಿ ಕುರಿತ ಆತಂಕವನ್ನು ಹೆಚ್ಚಿಸಿದೆ.
ಭಾಗಲಪುರದ ಐದು ಗ್ರಾಮಗಳಲ್ಲಿನ ಒಟ್ಟು 856 ರೈತರಿಂದ ಭೂಮಿ ಪಡೆದುಕೊಳ್ಳಲಾಗಿದೆ. ಕೃಷಿ ಆಧಾರಿತ ಜೀವನ ನಡೆಸುತ್ತಿದ್ದ ಕುಟುಂಬಗಳು ಭೂಮಿ ಕಳೆದುಕೊಂಡಿದ್ದು, ಇದೀಗ ದೊಡ್ಡ ಕೈಗಾರಿಕಾ ಯೋಜನೆಗಾಗಿ ಅದನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಸಮೂಹವನ್ನು ಗುರಿಯಾಗಿಸಿಕೊಂಡು, ಬ್ರಿಟಿಷರು ದೇಶವನ್ನು ಹೇಗೆ ದೋಚಿದರೋ ಅದೇ ರೀತಿಯಲ್ಲಿ ಬಂಡವಾಳಶಾಹಿಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರವು ಈ ಯೋಜನೆಯಿಂದ ವಿದ್ಯುತ್ ಉತ್ಪಾದನೆ ಹೆಚ್ಚಳ, ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸಮರ್ಥಿಸಿಕೊಂಡಿದೆ.
ಆದರೆ, ಪರಿಸರ ತಜ್ಞರು ಮತ್ತು ಸ್ಥಳೀಯ ರೈತರು ಹಸಿರು ಸಂಪತ್ತಿನ ನಾಶದಿಂದ ಪರಿಸರ ಸಮತೋಲನ ಹದಗೆಡುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಹಾರದಲ್ಲಿ ‘ಡಬಲ್ ಲೂಟಿ; ಕಾಂಗ್ರೆಸ್ ಆಕ್ರೋಶ
ಬಿಹಾರದಲ್ಲಿ ವಿದ್ಯುತ್ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ‘ಸ್ನೇಹಿತ’ ಗೌತಮ್ ಅದಾನಿ ಅವರಿಗೆ ಆಡಳಿತಾರೂಢ ಎನ್ಡಿಎ ಸರ್ಕಾರವು ₹1ರಂತೆ 1,050 ಎಕರೆ ಭೂಮಿಯನ್ನು 33 ವರ್ಷಗಳಿಗೆ ಗುತ್ತಿಗೆ ನೀಡಲು ಮುಂದಾಗಿದೆ. ಈ ಮೂಲಕ ಬಿಹಾರದ ಜನರಿಗೆ ಪ್ರತಿ ಯೂನಿಟ್ಗೆ ₹6.75ರಂತೆ ವಿದ್ಯುತ್ ಮಾರಾಟ ಮಾಡಲು ಅವಕಾಶ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಬಿಹಾರದಲ್ಲಿ ‘ಡಬಲ್ ಲೂಟಿ’ ನಡೆಯುತ್ತಿದೆ. ಬಿಹಾರದ ಜನರು ಭಾಗಲ್ಪುರದಲ್ಲಿ ನಿರ್ಮಿಸಲಾದ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದು ದೂರಿದ್ದಾರೆ.
‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು ₹21,400 ಕೋಟಿ ವೆಚ್ಚದ 2,400 ಮೆಗಾವ್ಯಾಟ್ ವಿದ್ಯುತ್ ಯೋಜನೆಗಾಗಿ ಅದಾನಿ ಅವರಿಗೆ ಒಂದು ವರ್ಷಕ್ಕೆ ಒಂದು ರೂಪಾಯಿಯಂತೆ ಹತ್ತು ಲಕ್ಷ ಮರಗಳು, 1,050 ಎಕರೆ ಭೂಮಿಯನ್ನು 33 ವರ್ಷಗಳ ಕಾಲ ಗುತ್ತಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ’ ಎಂದು ಖೇರಾ ಗುಡುಗಿದ್ದಾರೆ.
‘ಮೋದಿ ಸರ್ಕಾರ ಈ ವಿದ್ಯುತ್ ಸ್ಥಾವರವನ್ನು ಬಜೆಟ್ನಲ್ಲಿ ಘೋಷಿಸಿತ್ತು. ಜತೆಗೆ, ಸ್ಥಾವರವನ್ನು ಸ್ವತಃ ಸ್ಥಾಪಿಸುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೆಲವು ದಿನಗಳ ಬಳಿಕ ಈ ಯೋಜನೆಯನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಿತ್ತು. ಬಿಹಾರದ ರೈತರ ಭೂಮಿ, ಹಣ, ಕಲ್ಲಿದ್ದಲನ್ನು ಬಳಿಸಿಕೊಂಡು ಉತ್ಪಾದಿಸುವ ವಿದ್ಯುತ್ ಅನ್ನು ಜನರಿಗೆ ಪ್ರತಿ ಯೂನಿಟ್ಗೆ ₹6.75ರಂತೆ ಮಾರಾಟ ಮಾಡಲಾಗುತ್ತದೆ. ಇದುವೇ ಬಿಜೆಪಿ ಮಾಡುತ್ತಿರುವ ‘ಡಬಲ್ ಲೂಟಿ’ ಆಗಿದೆ. ಮೋದಿಯ ಆಪ್ತ ಸ್ನೇಹಿತರಾಗಿರುವ ಅದಾನಿಯವರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದು ಖೇರಾ ಕುಟುಕಿದ್ದಾರೆ.
‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಅದಾನಿಗೆ ವಿದ್ಯುತ್ ಸ್ಥಾವರ ಯೋಜನೆ ಮತ್ತು ಧಾರಾವಿ ಯೋಜನೆಯನ್ನು ನೀಡಲಾಗಿತ್ತು. ಅದೇ ರೀತಿ ಜಾರ್ಖಂಡ್ ಮತ್ತು ಛತ್ತೀಸಗಢದಲ್ಲಿ ಚುನಾವಣೆಗೂ ಮುನ್ನ ಕೈಗಾರಿಕೋದ್ಯಮಿಗಳಿಗೆ ಯೋಜನೆಗಳನ್ನು ನೀಡಲಾಗಿತ್ತು. ಬಿಜೆಪಿಗರು ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಭಾವಿಸಿದಾಗಲೆಲ್ಲಾ ಅದಾನಿಗೆ ಉಡುಗೊರೆಗಳನ್ನು ಮುಂಚಿತವಾಗಿ ನೀಡುತ್ತಿದ್ದಾರೆ ಎಂದು ಖೇರಾ ಆರೋಪಿಸಿದ್ದಾರೆ.
‘ಬಿಹಾರದಲ್ಲಿ ರೈತರನ್ನು ಬೆದರಿಸಿ, ಸಹಿ ಹಾಕುವಂತೆ ಒತ್ತಾಯಿಸಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕೆ ಹೊಲಿಸಿದರೆ ಪ್ರತಿ ಯೂನಿಟ್ ವಿದ್ಯುತ್ ಅನ್ನು ₹3 ರಿಂದ ₹4 ಹೆಚ್ಚುವರಿ ದರಕ್ಕೆ ಜನರಿಗೆ ಮಾರಾಟ ಮಾಡಲಾಗುತ್ತದೆ’ ಎಂದು ಖೇರಾ ವಿವರಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿಯು ‘ತಾಯಿಯ ಹೆಸರಿನಲ್ಲಿ ಒಂದು ಮರ’ ಎಂಬ ಅಭಿಯಾನವನ್ನು ನಡೆಸುತ್ತದೆ. ಆದರೆ, ರೈತರು ತಮ್ಮ ತಾಯಿಯಂತೆ ಪರಿಗಣಿಸುವ ಭೂಮಿಯನ್ನು ಕೇವಲ ₹1ರಂತೆ ಬೆಲೆ ನಿಗದಿಪಡಿಸುತ್ತದೆ. ಮೋದಿ ಅವರು ಆಪ್ತ ಸ್ನೇಹಿತನಿಗಾಗಿ (ಗೌತಮ್ ಅದಾನಿ) ಬಿಹಾರವನ್ನು ಲೂಟಿ ಮಾಡುತ್ತಿದ್ದಾರೆ. ಜತೆಗೆ, ಬಿಹಾರವನ್ನು ‘ಬಿಮಾರು ರಾಜ್ಯ’ವನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
🚨MIND-BOGGLING
— Mohit Chauhan (@mohitlaws) September 15, 2025
Bihar NDA government has given 1,020 acres of land in Bhagalpur to Adani at ₹1 per year for 30 years. 10 lakh mango trees will be cut down on this land.
Narendra Modi, along with his capitalist friends, is looting India just like the British once did. pic.twitter.com/3Mm6yVPVhI





