ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್ಐಆರ್) ವೇಳೆ ಗುರುತಿನ ಚೀಟಿಯಾಗಿ 10ನೇ ತರಗತಿ ಪರೀಕ್ಷೆಯ ಪ್ರವೇಶಪತ್ರ ಹಾಗೂ ತೇರ್ಗಡೆ ಪ್ರಮಾಣಪತ್ರವನ್ನು ಪೂರಕ ದಾಖಲೆಯಾಗಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ವಿಚಾರದ ಕುರಿತಂತೆ ಹಿರಿಯ ವಕೀಲ ಡಿ.ಎಸ್. ನಾಯ್ಡು ಅವರು ಪ್ರಸ್ತಾಪಿಸುತ್ತಿದ್ದಂತಯೇ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಪಂಚೋಲಿ ನೇತೃತ್ವದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.
ಪರೀಕ್ಷಾ ಪ್ರವೇಶ ಪತ್ರವನ್ನು ಸ್ವತಂತ್ರ ಗುರುತಿನ ಚೀಟಿಯಾಗಿ ಮಾನ್ಯ ಮಾಡಲು ಅವಕಾಶ ನೀಡಲಾಗುತ್ತದೆಯೇ ಎಂಬುದರ ಕುರಿತು ವಕೀಲರು ತಮ್ಮ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ, ಪ್ರವೇಶ ಪತ್ರವನ್ನು ಪೂರಕ ದಾಖಲೆಯಾಗಿ ಪರಿಗಣಿಸಬೇಕು ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿತು.
ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್ನ ಒಳಹೊರಗು
‘2026ರ ಫೆಬ್ರುವರಿ 3ರಂದು ಆದೇಶದಲ್ಲಿ ಪ್ಯಾರಾ 3 ರಲ್ಲಿ ಉಲ್ಲೇಖಿಸಲಾದ ದಾಖಲೆಗಳು ಇದುವರೆಗೂ ಅಪ್ಲೋಡ್ ಮಾಡಿಲ್ಲ. ಫೆಬ್ರುವರಿ 15ರವರೆಗೆ ಸ್ವೀಕರಿಸಲಾದ ಅರ್ಜಿಗಳು ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಗುರುವಾರ ಸಂಜೆ 5 ಗಂಟೆ ಒಳಗಾಗಿ ನ್ಯಾಯಾಂಗ ಅಧಿಕಾರಿಗಳ ಮುಂದೆ ಸಲ್ಲಿಸಬೇಕು. ಜನನ ಪ್ರಮಾಣಪತ್ರವಾಗಿ ಪ್ರವೇಶಪತ್ರದ ಜೊತೆಗೆ ತೇರ್ಗಡೆ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಹೆಚ್ಚುವರಿ ನ್ಯಾಯಾಧೀಶರ ನಿಯೋಜನೆ: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿ 80 ಲಕ್ಷ ಮತದಾರರ ಪಟ್ಟಿ ಅಳಿಸುವಿಕೆಯಿಂದ ಎದುರಿಸುತ್ತಿರುವ ಆಕ್ಷೇಪಣೆಗಳನ್ನು ಸಂಗ್ರಹಿಸಲು ಮಂಗಳವಾರ ಪಶ್ಚಿಮ ಬಂಗಾಳದ 250 ಮಂದಿ ನ್ಯಾಯಾಧೀಶರ ನಿಯೋಜನೆ ಜೊತೆಗೆ ಜಾರ್ಖಂಡ್ ಹಾಗೂ ಒಡಿಶಾದ ನ್ಯಾಯಾಧೀಶರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.





