ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿ 3.0 ಸರ್ಕಾರ ಬಹುಮತ ಪಡೆಯಲು ವಿಫಲವಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇಂಗ್ಲೆಂಡ್ನ ಫೈನಾನ್ಷಿಯಲ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಅವಕಾಶವನ್ನು ಗಾಳಿಗೆ ತೂರಲಾಗಿದೆ. ಭಾರತದ ರಾಜಕೀಯದಲ್ಲಿ ಸ್ಥಾನ ಪಲ್ಲಟಗಳು ನಡೆಯಲಿವೆ. ಸಂಖ್ಯೆಗಳನ್ನು ಗಮನಿಸಿದರೆ ಅವರು ತುಂಬ ದುರ್ಬಲವಾಗಿದ್ದಾರೆ. ಸಣ್ಣ ಅಡಚಣೆಯು ಸರ್ಕಾರವನ್ನು ಬೀಳಿಸಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಬಳಗದಲ್ಲಿಯೇ ದೊಡ್ಡ ಅಸಮಾಧಾನವಿದ್ದು, ಪಕ್ಷಾಂತರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರಲ್ಲಿ ನಮ್ಮ ಸಂಪರ್ಕದಲ್ಲಿರುವವರು ಇದ್ದಾರೆ. ಮೂಲತಃ ಒಂದು ಒಕ್ಕೂಟದಲ್ಲಿ ಇರುವವರು ಮತ್ತೊಂದು ಕಡೆ ಆಗಮಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
2024ರ ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ ಎನ್ಡಿಎ ಒಕ್ಕೂಟ 293 ಸ್ಥಾನಗಳಿಸಿದೆಯಾದರೂ ಬಿಜೆಪಿಗೆ ಬಹುಮತದ ಸಂಖ್ಯೆ 272 ಸ್ಥಾನ ದೊರಕದೆ 240ನ್ನು ಮಾತ್ರ ಗಳಿಸಿಕೊಂಡಿದೆ. ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಈ ನಡುವೆ ಎರೆಡು ಕ್ಷೇತ್ರಗಳಲ್ಲಿ ಗೆಲುವುಗಳಿಸಿದ್ದ ರಾಹುಲ್ ಗಾಂಧಿ ಕೇರಳದಲ್ಲಿನ ವಯನಾಡ್ ಕ್ಷೇತ್ರವನ್ನು ತೆರವುಗೊಳಿಸಿ ಉತ್ತರ ಪ್ರದೇಶದಲ್ಲಿನ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿಯನ್ನು ಉಳಿಸಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ತೆರವುಗೊಳಿಸಲಿರುವ ವಯನಾಡ್ ಲೋಕಸಭಾ ಕ್ಷೇತ್ರದಿಂದ ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ. ಈ ಮೂಲಕ ಅವರು ಕೊನೆಗೂ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ.
ನಿಯಮಗಳ ಪ್ರಕಾರ, ಜೂನ್ 4 ರಂದು ಹೊರಬಿದ್ದ ಲೋಕಸಭೆಯ ಫಲಿತಾಂಶದ 14 ದಿನಗಳಲ್ಲಿ ರಾಹುಲ್ ಗಾಂಧಿ ಒಂದು ಸ್ಥಾನವನ್ನು ಖಾಲಿ ಮಾಡಬೇಕಾಗಿತ್ತು. ಇದೀಗ ರಾಹುಲ್ ಗಾಂಧಿ ರಾಯ್ಬರೇಲಿಯಲ್ಲಿ ಉಳಿಯಲು ಆಯ್ಕೆ ಮಾಡಿಕೊಂಡಿರುವುದರಿಂದ, ಅವರ ಸಹೋದರಿ ಪ್ರಿಯಾಂಕಾ ಅವರು ತೆರವಾದ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ





