AI ಮೂಲಕ ತಯಾರಾಗುವ ತಪ್ಪು ಮಾಹಿತಿ (ಮಿಸ್ಇನ್ಫರ್ಮೇಶನ್)ಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವಷ್ಟು ಶಕ್ತಿ ಹೊಂದಿವೆ. ಕೃತಕ ಬುದ್ಧಿಮತ್ತೆಯ ಯಾವುದೇ ಸಾಧನಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಇಂದಿನಿಂದ ಶುರುವಾಗಿರುವ AI ಇಂಪ್ಯಾಕ್ಟ್ ಸಮಿಟ್ನ ಅಧಿವೇಶನದಲ್ಲಿ ಮಾತನಾಡಿದ ಅವರು, “AI ತಂತ್ರಜ್ಞಾನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕಲಿಕೆಯನ್ನು ಬಲಪಡಿಸಬಲ್ಲದು. ಆದರೆ ಇದನ್ನು ಸುಲಭ ಮಾರ್ಗವಾಗಿ ಬಳಸುವುದರಿಂದ ವಿಮರ್ಶಾತ್ಮಕ ಚಿಂತನೆ ಮತ್ತು ಕುತೂಹಲ ಕುಗ್ಗಬಾರದು. ಶಿಕ್ಷಕರಿಗೆ ಪರ್ಯಾಯವಾಗಿ ಎಐ ಬರಲಾರದು; ಶಿಕ್ಷಣದಲ್ಲಿ ಎಐ ಬಳಕೆಯ ಅಪಾಯಗಳನ್ನು ಜಾಗ್ರತೆಯಿಂದ ನಿಭಾಯಿಸಬೇಕು” ಎಂದರು.
ಡಿಜಿಟಲ್ ಸಾಕ್ಷರತೆ ಇಲ್ಲದಿದ್ದರೆ ಸೈಬರ್ ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಎಚ್ಚರಿಸಿದ ಅವರು, “ಇಂದಿನ ದಿನಗಳಲ್ಲಿ ಸೈಬರ್ ಸುರಕ್ಷತೆ ದೊಡ್ಡ ಸವಾಲಾಗಿದ್ದು, ಎಐ ಡೀಪ್ಫೇಕ್ಗಳು ಹಾಗೂ ತಪ್ಪು ಮಾಹಿತಿಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟಾಗಬಹುದು. ಭಾರತದಲ್ಲಿ ವರ್ಷಪೂರ್ತಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವ ಕಾರಣ, ಎಐ ಮೂಲಕ ಹರಡುವ ತಪ್ಪು ಮಾಹಿತಿ ಜನರ ಅಭಿಪ್ರಾಯಗಳನ್ನು ತಪ್ಪು ದಿಕ್ಕಿಗೆ ತಳ್ಳಬಹುದು. ಸುಳ್ಳು ಮಾಹಿತಿಯ ಮೇಲೆ ಮತದಾನವಾದರೆ ಅದು ಅತ್ಯಂತ ಹಾನಿಕರ” ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಎಐ ಮಹತ್ವವನ್ನು ಉಲ್ಲೇಖಿಸಿದ ಅವರು, “AI ನ್ನು ಪಠ್ಯಕ್ರಮದ ಒಂದು ವಿಷಯವಾಗಿ ಮಾತ್ರವಲ್ಲ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯೊಳಗೆ ಅಳವಡಿಸಬೇಕು ಎಂದರು. ಯುವಕರಲ್ಲಿ ಸಾಮರ್ಥ್ಯ ವೃದ್ಧಿ, ಗಣನಾತ್ಮಕ ಚಿಂತನೆ ಮತ್ತು ಎಐಯ ಉತ್ತಮ ಬಳಕೆಯ ಅರಿವು ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: AI ಜೊತೆ ಕೂತು ಕೆಲಸ ಮಾಡಬೇಕಿದೆ; ಅದಕ್ಕೆ ಡಿಗ್ರಿಗಳಷ್ಟೇ ಸಾಲದು…
ವಿದ್ಯಾರ್ಥಿಗಳು ಎಐಯನ್ನು ʼಶಾರ್ಟ್ಕಟ್ʼ ಆಗಿ ನೋಡಬಾರದು. ವಿಶೇಷವಾಗಿ ಚಿಕ್ಕ ಮಕ್ಕಳು ಹೋಂವರ್ಕ್ ಮಾಡಲು ಎಐ ಬಳಸುವುದು ಸರಿಯಲ್ಲ; ದೀರ್ಘಾವಧಿಯಲ್ಲಿ ಅದು ಹಿತಕರವಾಗುವುದಿಲ್ಲ. ಶಿಕ್ಷಕರು ಎಐಯನ್ನು ಸಹಾಯಕ ಸಾಧನವಾಗಿ ಬಳಸಬಹುದು, ಆದರೆ ಶಿಕ್ಷಕರ ಸ್ಥಾನವನ್ನು ಎಐ ತುಂಬಲಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಸ್ಪಷ್ಟಪಡಿಸಿದರು. ಎಐಗೆ ಇಂಧನವೇ ಡೇಟಾ; ಈ ಕ್ಷೇತ್ರದಲ್ಲಿ ಭಾರತಕ್ಕೆ ವಿಶಿಷ್ಟ ಮುನ್ನಡೆ ಇದೆ. ಸಂಶೋಧಕರು, ನವೋದ್ಯಮಿಗಳು ಹಾಗೂ ದೇಶೀಯ ಕೈಗಾರಿಕೆಗಳಿಗೆ ಅಗತ್ಯವಾದ ಸುರಕ್ಷಿತ ಮತ್ತು ವೈಯಕ್ತಿಕವಲ್ಲದ ಡೇಟಾವನ್ನು ಸರ್ಕಾರ ಒದಗಿಸುತ್ತಿದೆ. ಅದನ್ನು ಬಳಸಿಕೊಂಡು ಜವಾಬ್ದಾರಿಯುತ ಅಭಿವೃದ್ಧಿಯತ್ತ ಕಾರ್ಯೋನ್ಮುಖರಾಗಬೇಕು” ಎಂದು ಹೇಳಿದರು.





