ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಿಂದ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾಂಡಾ ಅವರ ಒಡೆತನದ ಎಂಎಲ್ಡಿಆರ್ ಏರ್ಲೈನ್ಸ್ನಲ್ಲಿ ಗೀತಿಕಾ ಶರ್ಮ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ದೆಹಲಿಯ ಅವರ ಅಶೋಕ್ ವಿಹಾರ್ ಮನೆಯಲ್ಲಿ 2012ರ ಆಗಸ್ಟ್ 5ರಂದು ಗೀತಿಕಾರ ಮೃತದೇಹ ಪತ್ತೆಯಾಗಿತ್ತು. ಕಾಂಡ ಅವರ ಕಿರುಕುಳಕ್ಕೆ ಬೇಸತ್ತು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಡೆತ್ನೋಟ್ ಬರೆದಿಟ್ಟಿದ್ದರು.
ಹರಿಯಾಣದ ಸಿರ್ಸಾ ಕ್ಷೇತ್ರದ ಶಾಸಕರಾಗಿದ್ದ ಗೋಪಿನಾಥ್ ಗೋಯಲ್ ಕಾಂಡ, ಭೂಪೇಂದರ್ ಹೂಡಾ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ನಂತರ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು.
2019ರ ಚುನಾವಣೆಯಲ್ಲಿ ಬಿಜೆಪಿ ಗೋಪಾಲ್ ಕಾಂಡ ಅವರ ಜೊತೆ ಮಾತುಕತೆಗೆ ಮುಂದಾಗಿತ್ತು. ಅವರ ಮೂಲಕ ಸ್ವತಂತ್ರ ಶಾಸಕರನ್ನು ಸೆಳೆಯುವುದು ಬಿಜೆಪಿ ಉದ್ದೇಶವಾಗಿತ್ತು. ನಂತರ ಪಕ್ಷದೊಳಗೆ ಅದರ ಬಗ್ಗೆ ಭಿನ್ನಮತ ವ್ಯಕ್ತವಾಗಿದ್ದರಿಂದ ಬಿಜೆಪಿ ಆ ಪ್ರಸ್ತಾವನೆಯಿಂದ ಹಿಂದೆ ಸರಿದಿತ್ತು.
ಗೀತಿಕಾ ಶರ್ಮ ಅವರ ಸಾವಿನ ದುಃಖದಲ್ಲಿಯೇ ಅವರ ತಾಯಿ ಅನುರಾಧ ಕೂಡ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದರು. ಮಗಳು ಸತ್ತ ಕೋಣೆಯಲ್ಲಿಯೇ ಅದೇ ರೀತಿ ತಾಯಿ ಕೂಡ ತಮ್ಮ ಜೀವನ ಅಂತ್ಯ ಮಾಡಿಕೊಂಡಿದ್ದರು.





