ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 401ಕ್ಕೆ ಏರಿಕೆಯಾಗಿದೆ. ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಸಿದಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ವಿಮಾನ ಹಾರಾಟಕ್ಕೂ ಅಡ್ಡಿ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ದೆಹಲಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.
ಮಂಗಳವಾರ ಬೆಳಗ್ಗೆ, ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ ಮತ್ತು ಸಫ್ದರ್ಜಂಗ್ನಲ್ಲಿ ಗೋಚರತೆ ಕೇವಲ 50 ಮೀಟರ್ನಿಂದ 100 ಮೀಟರ್ವರೆಗೆ ಮಾತ್ರವೇ ಇದೆ. ಪರಿಣಾಮವಾಗಿ, ದೆಹಲಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಬೇಕಿದ್ದ ಕನಿಷ್ಠ 128 ವಿಮಾನಗಳನ್ನು ರದ್ದುಗೊಳಿಸಲಾಗಿದೆ, 8 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಹಾಗೂ ಸುಮಾರು 200 ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ವಿಮಾನ ಟ್ರ್ಯಾಕಿಂಗ್ ವೆಬ್ಸೈಟ್ಅನ್ನು ನಿರ್ವಹಿಸುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣವು ‘ಕೆಟಗರಿ-3’ರ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ವಿಮಾನಗಳು ಕಡಿಮೆ ಗೋಚರತೆಯಲ್ಲಿ ಇಳಿಯಲು ಅನುವು ಮಾಡಿಕೊಡುತ್ತದೆ.
ವಾಯು ಮಾಲಿನ್ಯ ಮತ್ತು ಮಂಜಿನ ವಾತಾವರಣವು ರೈಲ್ವೆ ಸೇವೆಗಳ ಮೇಲೂ ಪರಿಣಾಮ ಬೀರಿವೆ. ದೆಹಲಿಗೆ ಪ್ರವೇಶಿಸುವ ಮತ್ತು ದೆಹಲಿಯಿಂದ ಹೊರಡುವ ಹಲವಾರು ರೈಲುಗಳ ಸಂಚಾರ ವಿಳಂಬವಾಗಿದೆ.
ಇನ್ನು, ವಾಯು ಮಾಲಿನ್ಯದ ಕಾರಣದಿಂದಾಗಿ, ವೈದ್ಯಕೀಯ ಸಂಸ್ಥೆ ‘ಅಕುಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್’ನ ಹಣಕಾಸು ಅಧ್ಯಕ್ಷ ರಾಜ್ಕುಮಾರ್ ಬಫ್ನಾ ಅವರು ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕು. ತಮ್ಮ ಕರ್ತವ್ಯಗಳಿಂದ ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಕಂಪನಿ ಅಂಗೀಕರಿಸಿದೆ.
“ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ನಿರಂತರವಾಗಿ ಅಪಾಯಕಾರಿ ಪರಿಸ್ಥಿತಿಗೆ ಜಾರುತ್ತಲೇ ಇದೆ. ಆರೋಗ್ಯದ ಅಪಾಯಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ದೆಹಲಿ ತೊರೆಯಲು ನಿರ್ಧರಿಸಿದ್ದು, ರಾಜೀನಾಮೆ ನೀಡುತ್ತಿದ್ದೇನೆ” ಎಂಧು ಬಫ್ನಾ ಹೇಳಿದ್ದಾರೆ. ಅನುಭವಿ ಹಣಕಾಸು ತಜ್ಞನನ್ನು ಕಳೆದುಕೊಂಡಿದ್ದಕ್ಕಾಗಿ ಅಕುಮ್ಸ್ ಕಂಪನಿ ವಿಷಾದ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 401ಕ್ಕೆ ಏರಿಕೆಯಾಗಿದೆ. ಇದನ್ನು ‘ತೀವ್ರ’ ವರ್ಗವೆಂದು ಗುರುತಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶ ತೋರಿಸಿದೆ.
ಸಿಪಿಸಿಬಿ ಮಾನದಂಡಗಳ ಪ್ರಕಾರ, 0 ಮತ್ತು 50ರ ನಡುವಿನ AQIಅನ್ನು ‘ಉತ್ತಮ’, 51 ರಿಂದ 100ರವೆರಗೆ ‘ತೃಪ್ತಿದಾಯಕ’, 101 ರಿಂದ 200ರವರೆಗೆ ‘ಮಧ್ಯಮ’, 201 ರಿಂದ 300ವರೆಗೆ ‘ಕಳಪೆ’, 301 ರಿಂದ 400 ‘ತುಂಬಾ ಕಳಪೆ’ ಹಾಗೂ 401 ರಿಂದ 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
ದೆಹಲಿಯ 24 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟವು ‘ತೀವ್ರ’ವಾಗಿದ್ದರೆ, 13 ನಿಲ್ದಾಣಗಳಲ್ಲಿ ಅದು ‘ತುಂಬಾ ಕಳಪೆ’ ಗುಣಮಟ್ಟವು ದಾಖಲಾಗಿದೆ.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ
ನಗರದ ವಾಯು ಮಾಲಿನ್ಯವನ್ನು ನಿಭಾಯಿಸಲು ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ (GRAP-4) ಅಡಿಯಲ್ಲಿ ಎರಡು ಪ್ರಮುಖ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
- ಮುಂದಿನ ಸೂಚನೆ ಬರುವವರೆಗೆ ಮಾನ್ಯವಾದ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ (PUCC) ಇಲ್ಲದೆ ವಾಹನಗಳಿಗೆ ಪೆಟ್ರೋಲ್ ನೀಡಲಾಗುವುದಿಲ್ಲ.
- ಭಾರತ್ ಸ್ಟೇಜ್ (ಬಿಎಸ್) VI (BS6) ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸದ ಹೊರಗಿನ ವಾಹನಗಳು ದೆಹಲಿ ಪ್ರವೇಶಿಸಲು ಅವಕಾಶವಿಲ್ಲ. ದೆಹಲಿ ಗಡಿ ಭಾಗದ ಟೋಲ್ಗಳಲ್ಲಿಯೇ ಅಂತಹ ವಾಹನಗಳನ್ನು ನಿರ್ಬಂಧಿಸಲಾಗುತ್ತದೆ.
GRAP-IV ಅಡಿಯಲ್ಲಿ ವಾಹನಗಳಿಗೆ ನಿರ್ಬಂಧಗಳು
1. ಪೆಟ್ರೋಲ್ ಕಾರನ್ನು ಹೊಂದಿದ್ದರೆ
- ದೆಹಲಿಯಲ್ಲಿ ನೋಂದಾಯಿಸಿದ ವಾಹನಗಳು BS-IV ಅಥವಾ BS-VI ಮಾನದಂಡಗಳನ್ನು ಪೂರೈಸಿದ್ದರೆ ದೆಹಲಿಯಲ್ಲಿ ಚಲಾಯಿಸಬಹುದು.
- BS-III ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಹಂತಹ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ.
- ದೆಹಲಿಯ ಹೊರಗೆ ನೋಂದಾಯಿಸಿದ ವಾಹನಗಳು BS-VI ಮಾನದಂಡಗಳಿಗೆ ಅನುಗುಣವಾಗಿದ್ದರೆ ಮಾತ್ರ, ದೆಹಲಿಗೆ ಪ್ರವೇಶ.
- ವಾಹನಗಳ ಹೊರಸೂಸುವಿಕೆಯು BS-IV ಅಥವಾ ಅದಕ್ಕಿಂತ ಕಡಿಮೆ ಇದ್ದರೆ ದೆಹಲಿ ಪ್ರವೇಶ ನಿರ್ಬಂಧ.
2. ಡೀಸೆಲ್ ಕಾರನ್ನು ಹೊಂದಿದ್ದರೆ
- ವಾಹನಗಳು BS-VI ಮಾನದಂಡಗಳನ್ನು ಪೂರೈಸಿದ್ದರೆ ಮಾತ್ರ ದೆಹಲಿಯಲ್ಲಿ ಓಡಿಸಬಹುದು. ವಿನಾಯಿತಿ: ಅಗತ್ಯ ಸೇವೆಗಳ ವಾಹನಗಳು, ಎಲೆಕ್ಟ್ರಿಕ್ ವಾಹನಗಳು ಹಾಗೂ CNG ಚಾಲಿತ ಎಲ್ಲ ವಾಹನಗಳು
ದೆಹಲಿಯಲ್ಲಿ 126 ಪ್ರವೇಶ ಕೇಂದ್ರಗಳಿದ್ದು, ಅವುಗಳಿಗೆ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಅವುಗಳಲ್ಲಿ ವಾಹನಗಳ ‘ಎಮಿಷನ್’ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಬಿಎಸ್ ಮಾನದಂಡಗಳಿಗೆ ಪೂರಕವಾಗಿ ವಾಹನಗಳ ಸ್ಥಿತಿ ಇದ್ದರೆ, ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲವಾದಲ್ಲಿ, ಸಂಚಾರ ನಿರ್ಬಂಧಿಸಲಾಗುತ್ತದೆ.




