ಕಾಳಿ ಪೂಜೆಯ ರಾತ್ರಿ ಕಳೆಯುತ್ತಿದ್ದಂತೆ ಪಶ್ಚಿಮ ಬಂಗಾಳದ ಕೋಲ್ಕತ್ತಾ, ಹೌರಾದಲ್ಲಿ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ರಾತ್ರಿ 8ರಿಂದ ರಾತ್ರಿ 10ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿತ್ತು. ಆದರೆ ಮಾರ್ಗಸೂಚಿ ಉಲ್ಲಂಘಿಸಿ ಹಲವು ಕಡೆ ನಿಗದಿತ ಸಮಯಕ್ಕಿಂತ ಅಧಿಕ ಅವಧಿ ಪಟಾಕಿ ಸಿಡಿಸಲಾಗಿದೆ. ಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ (ಡಬ್ಲ್ಯೂಬಿಪಿಸಿಬಿ) ಮತ್ತು ಪೊಲೀಸರು ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರವಾದಿಗಳು ಮಂಗಳವಾರ ತಿಳಿಸಿದ್ದಾರೆ.
ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 186 PM 2.5ಕ್ಕೆ ತಲುಪಿದೆ. ಸೋಮವಾರ ರಾತ್ರಿ 10 ಗಂಟೆಗೆ ಹೌರಾದ ಬೇಲೂರಿನಲ್ಲಿ ವಾಯು ಗುಣಮಟ್ಟ 364ಕ್ಕೆ ತಲುಪಿದೆ ಎಂದು ಡಬ್ಲ್ಯೂಬಿಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 151ರಿಂದ 200ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು ‘ಕಳಪೆ’ ಎಂದು ಪರಿಗಣಿಸಲಾಗುತ್ತದೆ. 201ರಿಂದ 300 ‘ತುಂಬಾ ಕಳಪೆ’ ಎಂದು ಮತ್ತು 300ಕ್ಕಿಂತ ಹೆಚ್ಚಿನದನ್ನು ‘ಗಂಭೀರ’ ಎಂದು ವರ್ಗೀಕರಿಸಲಾಗಿದೆ.
ಇದನ್ನು ಓದಿದ್ದೀರಾ? ಪಟಾಕಿ ಎಫೆಕ್ಟ್ | ದೆಹಲಿಯಲ್ಲಿ ಗಾಳಿ ಗುಣಮಟ್ಟ ತೀವ್ರ ಕುಸಿತ
ಕೋಲ್ಕತ್ತಾದ ಪದ್ಮಪುಕುರ್ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 361ರಷ್ಟಿದೆ. ಆದರೆ ಹೌರಾ ಜಿಲ್ಲೆಯ ಘುಸುರಿಯಲ್ಲಿ ವಾಯು ಗುಣಮಟ್ಟ 252 ಅನ್ನು ಮೀರಿದೆ. ಕೋಲ್ಕತ್ತಾದ ಬ್ಯಾಲಿಗಂಜ್ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 173 ಕ್ಕೆ ತಲುಪಿದ್ದರೆ, ಜಾದವ್ಪುರದಲ್ಲಿ 169ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪರಿಸರವಾದಿ ಸೋಮೇಂದ್ರ ಮೋಹನ್ ಘೋಷ್, “ಉತ್ತರ ಮತ್ತು ದಕ್ಷಿಣ ಕೋಲ್ಕತ್ತಾ ಮತ್ತು ಹೌರಾದಲ್ಲಿ ಅಧಿಕ ಶಬ್ದ ಮಾಡುವ ಪಟಾಕಿಗಳನ್ನು ಹೆಚ್ಚಾಗಿ, ಆಗಾಗ್ಗೆ ಬಳಸಲಾಗುತ್ತಿದೆ. ಕಾಶಿಪುರ, ಸಿಂಥಿ, ಜೋರಾಸಂಕೊ, ಮಾಣಿಕ್ತಲಾ ಹೀಗೆ ಹಲವೆಡೆ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಲಾಗಿದೆ. ಪೊಲೀಸರು ಮತ್ತು ಡಬ್ಲ್ಯೂಬಿಪಿಸಿಬಿ ಅಧಿಕಾರಿಗಳು ಇವೆಲ್ಲವನ್ನೂ ಬರೀ ನೋಡುತ್ತಾ ಕೂತಿದ್ದಾರೆ. ಇಂತಹ ಪಟಾಕಿಗಳ ಮಾರಾಟ, ಬಳಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಹೌರಾದಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಮಂಗಳವಾರ ಕಾಳಿ ಪೂಜೆಯ ನಂತರ ಪರಿಸ್ಥಿತಿ ಇನ್ನಷ್ಟೂ ಕೆಟ್ಟದಾಗಲಿದೆ” ಎಂದರು. ಇನ್ನು ಪರಿಸರವಾದಿಗಳ ಸಂಘಟನೆಯಾದ ಸಬುಜ್ ಮಂಚ್ನ ನಬಾ ದತ್ತಾ, ಪೊಲೀಸರು ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಹಾಗೆಯೇ ಇದರಿಂದಾಗಿ ವೃದ್ಧರು, ಅಸ್ವಸ್ಥರು, ಮಕ್ಕಳು, ಸಾಕುಪ್ರಾಣಿಗಳು ಮಾಲಿನ್ಯದ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.





