ಕೆಲವು ರಾಷ್ಟ್ರಗಳು ತಮ್ಮ ಅಧಿಕಾರ ಬಳಸಿಕೊಂಡು, ತಮ್ಮಿಚ್ಛೆಯನ್ನು ಇತರ ರಾಷ್ಟ್ರಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಆದ್ದರಿಂದಲೇ ಯುದ್ಧಗಳು ಸಂಭವಿಸುತ್ತವೆ. ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಆದರೆ, ತನಗಿರುವ ಬೆದರಿಕೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ‘ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್’ ಸಂವಾದದಲ್ಲಿ ಅವರು ಮಾತನಾಡಿದರು. ವೆನೆಜುವೆಲಾ ಅಧ್ಯಕ್ಷರನ್ನು ಅಮೆರಿಕ ಸೆರೆ ಹಿಡಿದಿರುವುದು, ರಷ್ಯಾ-ಸಂಘರ್ಷ, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ, ಗ್ರೀನ್ ಲ್ಯಾಂಡ್ ಖರೀದಿಗೆ ಮುಂದಾಗಿರುವ ಟ್ರಂಪ್ – ಇಂತಹ ಹಲವು ಅಂತರಾಷ್ಟ್ರೀಯ ಸಂಘರ್ಷಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕೆಲವು ರಾಷ್ಟ್ರಗಳು ತಮ್ಮ ಅಧಿಕಾರ, ಇಚ್ಛೆಯನ್ನು ಮತ್ತೊಬ್ಬರ ಮೇಲೆ ಹೇರಲು ಯತ್ನಿಸುತ್ತಿರುವುದರಿಂದಲೇ ಇಷ್ಟೆಲ್ಲ ಸಂಘರ್ಷಗಳು ನಡೆಯುತ್ತಿದೆ’ ಎಂದಿದ್ದಾರೆ.
“ಭಾರತ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಆದರೆ, ತನ್ನ ರಾಷ್ಟ್ರೀಯ ಭದ್ರತೆಗೆ ಇರುವ ಬೆದರಿಕೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಭಾರತವು ಗಡಿಗಳಲ್ಲಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
“ಇತಿಹಾಸದಲ್ಲಿ ನಾವು ಯಾರ ಮೇಲೂದಾಳಿ ಮಾಡಿಲ್ಲ. ಆದರೆ, ನಮ್ಮ ಮೇಲೆ ದಾಳಿಗಳು ನಡೆದಿವೆ. ಆ ದಾಳಿಗಳಲ್ಲಿ ನಮ್ಮ ಹಳ್ಳಿಗಳನ್ನು ಸುಟ್ಟುಹಾಕಲಾಯಿತು. ನಮ್ಮ ನಾಗರಿಕತೆಯನ್ನು ನಾಶಪಡಿಸಲಾಯಿತು. ಆದರೆ, ನಾವು ಅಸಹಾಯಕರಾಗಿ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೆವು. ಇತಿಹಾಸದಿಂದ ನಾವು ಪಾಠ ಕಲಿಯಬೇಕು ದೇಶವನ್ನು ಗಡಿ ಭದ್ರತೆ, ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಅಂಶದಲ್ಲೂ ಮತ್ತೆ ಶ್ರೇಷ್ಠವಾಗುವ ಹಂತಕ್ಕೆ ಕೊಂಡೊಯ್ಯಬೇಕು” ಎಂದು ಅಜಿತ್ ದೋವಲ್ ತಿಳಿಸಿದ್ದಾರೆ.




