ಜನವರಿ 28ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ಸಾವಿನ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಕೋರಿ ಎನ್ಸಿಪಿ (ಶರದ್ ಪವಾರ್ ಬಣ) ನಾಯಕ ರೋಹಿತ್ ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಶನಿವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಅಜಿತ್ ದಾದಾ’ ಅವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಹಿಂದೆಯೇ ಪತ್ರಿಕಾಗೋಷ್ಠಿ ನಡೆಸಿ, ಈ ಸಂಶಯಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ಜನರ ಮುಂದಿಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಖುದ್ದು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರನ್ನು ಭೇಟಿ ಮಾಡಲು ಪ್ರಯತ್ನಿಸಲಾಯಿತು. ಆದರೆ, ಕಾರಣಾಂತರಗಳಿಂದ ಈ ಭೇಟಿ ಸಾಧ್ಯವಾಗಲಿಲ್ಲ ಎಂದು ರೋಹಿತ್ ಪವಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ, ಅಪಘಾತದ ಕುರಿತಾದ ನಮ್ಮ ಎಲ್ಲ ಸಂಶಯಗಳು ಮತ್ತು ವಿವರವಾದ ಪ್ರಸ್ತುತಿಯನ್ನು ಇಮೇಲ್ ಮೂಲಕ ಗೃಹ ಸಚಿವರು, ವಿಮಾನಯಾನ ಸಚಿವರು ಹಾಗೂ ಡಿಜಿಸಿಎ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸತ್ಯಾಂಶವನ್ನು ಹೊರತರಲು ಮತ್ತು ಮಹಾರಾಷ್ಟ್ರದ ಜನತೆಯನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನಾವು ಪತ್ರಿಕಾಗೋಷ್ಠಿ ನಡೆಸಿದ ನಂತರ ತನಿಖೆಗೆ ಕೊಂಚ ಚುರುಕು ಮುಟ್ಟಿದೆ. ಆದರೆ, ನಿರೀಕ್ಷಿತ ವೇಗದಲ್ಲಿ ತನಿಖೆ ಸಾಗುತ್ತಿಲ್ಲ. ಸಂಸತ್ತಿನ ಅಧಿವೇಶನದ ಕಾರಣ ಸಚಿವರುಗಳಿಗೆ ಸಮಯ ನೀಡಲು ಸಾಧ್ಯವಾಗಿಲ್ಲದಿರಬಹುದು, ಆದರೆ ಡಿಜಿಸಿಎ ಅಧಿಕಾರಿಗಳು ಏಕೆ ಸಮಯ ನೀಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ರೋಹಿತ್ ಪ್ರಶ್ನಿಸಿದ್ದಾರೆ.
”ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮದೇ ರೀತಿಯಲ್ಲಿ ಸತ್ಯಶೋಧನೆಗೆ ಪ್ರಯತ್ನಿಸುತ್ತಿದ್ದೇವೆ. ರಾಜ್ಯ ಸರ್ಕಾರ ಮತ್ತು ಅಧಿಕಾರದಲ್ಲಿರುವವರು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.
ಎನ್ಸಿಪಿ ವಿಲೀನ ತಳ್ಳಿಹಾಕಿದ ಶರದ್ ಪವಾರ್ ಬಣ
ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ-ಎಸ್ಪಿ)ಯು ಅಜಿತ್ ಪವಾರ್ ಬಣದೊಂದಿಗಿನ ವಿಲೀನದ ವಿಚಾರವನ್ನು ಶರದ್ ಪವಾರ್ ಬಣ ತಳ್ಳಿಹಾಕಿದೆ. ಈ ಬಗ್ಗೆ ಮಾತನಾಡಿದ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶಶಿಕಾಂತ ಶಿಂಧೆ ಅವರು “ನಾವು ಒತ್ತಡ ಹೇರಿದ್ದೇವೆ ಎಂಬುದು ಸರಿಯಲ್ಲ. ಈಗ ನಾವು ಪಕ್ಷವನ್ನು ಮರುನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. 2023ರಲ್ಲಿ ಪಕ್ಷ ಒಡೆದು ಬಿಜೆಪಿ-ಶಿಂಧೆ ಶಿವಸೇನೆ ಮೈತ್ರಿಗೆ ಸೇರಿದ್ದ ಅಜಿತ್ ಗುಂಪಿನೊಂದಿಗೆ ವಿಲೀನದ ಚರ್ಚೆಗೆ ಇದೀಗ ಅವಕಾಶವಿಲ್ಲ ಎಂದರು. ಇತ್ತೀಚೆಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್ ಅವರು ಶೀಘ್ರದಲ್ಲೇ ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬ ಬಗ್ಗೆಯೂ ಮಾತನಾಡಿದ ಶಶಿಕಾಂತ ಶಿಂಧೆ, ಸುನೇತ್ರ ಅವರೇ ತಮ್ಮ ಪಕ್ಷದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದರು.





