ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಕಾರಣವಾದ ಬಾರಾಮತಿ ವಿಮಾನ ದುರಂತವು ಕೇವಲ ಆಕಸ್ಮಿಕವಾಗಿರದೆ, ಇದರ ಹಿಂದೆ ವಿಧ್ವಂಸಕ ಕೃತ್ಯ ಅಥವಾ ದೊಡ್ಡದಾದ ಸಂಚು ಅಡಗಿರುವ ಸಾಧ್ಯತೆ ಇದೆ ಎಂದು ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ‘ಪವರ್ ಪಾಯಿಂಟ್’ ಪ್ರದರ್ಶನದ ಮೂಲಕ ವಿವರ ನೀಡಿದ ಅವರು, “ಅಜಿತ್ ದಾದಾ ಅವರ ಪ್ರಯಾಣ ಮೊದಲು ರಸ್ತೆ ಮೂಲಕ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ವಿಮಾನ ಪ್ರಯಾಣ ನಿರ್ಧರಿಸಿದ್ದು ಯಾರು? ವಿಮಾನದ ಚಾಲಕ ಸುಮಿತ್ ಕಪೂರ್ ಅವರ ಹಿನ್ನೆಲೆ ಸರಿಯಿಲ್ಲ, ಹಾಗೂ ವಿಮಾನದ ‘ಟ್ರಾನ್ಸ್ಪಾಂಡರ್’ ಕೊನೆಯ ಕ್ಷಣದಲ್ಲಿ ಸ್ಥಗಿತಗೊಂಡಿತ್ತು,” ಎಂದು ಹಲವು ಅನುಮಾನಗಳನ್ನು ಎತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?
”ಇದು ಕೇವಲ ಅಪಘಾತವಲ್ಲ, ಬದಲಿಗೆ ರಾಜಕೀಯ ಹಿತಾಸಕ್ತಿಯ ಸಂಚಿರಬಹುದು. ಪುಸ್ತಕವೊಂದರ ಉಲ್ಲೇಖದಂತೆ, ಪ್ರಮುಖ ವ್ಯಕ್ತಿಯನ್ನು ಮುಗಿಸಲು ಅವರಿಗೆ ಆಪ್ತರಾದ ಚಾಲಕನನ್ನು ಗುರಿ ಮಾಡಬಹುದು,” ಎಂದು ಅವರು ಸೂಚ್ಯವಾಗಿ ಹೇಳಿದರು. ಘಟನೆಯ ಸತ್ಯಾಸತ್ಯತೆ ಹೊರಬರಲು ಕೇವಲ ಸಿಐಡಿ ತನಿಖೆ ಸಾಲದು, ಬದಲಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಾದ ಎಎಐಬಿ (AAIB – UK) ಅಥವಾ ಎನ್ಟಿಎಸ್ಬಿ (NTSB) ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.





